ಉಡುಪಿ :: ಹೆಬ್ರಿ ತಾಲೂಕಿನ ಹೊಸೂರು ಪ್ರದೇಶದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಗೆ ಕಾರ್ಕಳ ಉಪ ವಿಭಾಗದ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ರೂ13.07 ಲಕ್ಷ ಮೌಲ್ಯದ ನಗದು, ವಾಹನಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಉಪಾಧೀಕ್ಷಕರಿಗೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ನೇತೃತ್ವದ ತಂಡ ಜೂನ್ 6ರಂದು ಸಂಜೆ ಹೊಸೂರಿನಲ್ಲಿ ದಾಳಿ ನಡೆಸಿತು. ಈ ವೇಳೆ ಚಪ್ಪರ ನಿರ್ಮಿಸಿ, ಟೇಬಲ್ ಸುತ್ತ ಕುಳಿತು ‘ಅಂದರ್-ಬಾಹರ್’ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಲಾಯಿತು.

ಬಂಧಿತರನ್ನು ಮಂಗಳೂರು ಮೂಲದ ವಿಜೇಶ್ ಕುಮಾರ (40), ದಸ್ತಗೀರ್ (33) ಹಾಗೂ ರೋಹಿತ್ (34) ಎಂದು ಗುರುತಿಸಲಾಗಿದೆ. ದಾಳಿ ವೇಳೆ ರೂ23,970 ನಗದು, ಐದು ಮೊಬೈಲ್ ಫೋನ್ಗಳು, ಇಸ್ಪೀಟ್ ಕಾರ್ಡ್ಗಳು, ಟೇಬಲ್, ಕುರ್ಚಿಗಳು, ಬ್ಯಾಟರಿ ಹಾಗೂ ಇತರೆ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಲ್ಲದೆ ಜೂಜಾಟಕ್ಕೆ ಬಳಸಿದ್ದ ಮೂರು ಕಾರುಗಳು, ಎರಡು ಮೋಟಾರ್ ಸೈಕಲ್ಗಳು ಮತ್ತು ಒಂದು ಸ್ಕೂಟರ್ನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಮುಂದಿನ ತನಿಖೆಯಲ್ಲಿ ದಾಳಿ ವೇಳೆ ಪರಾರಿಯಾಗಿದ್ದ ವಿಜಯ (39), ಮಹೇಶ್ (26), ಕಿಶೋರ್ ಕುಮಾರ್ (46) ಹಾಗೂ ಸಂತೋಷ್ ಆಚಾರ್ಯ (35) ಎಂಬ ನಾಲ್ವರನ್ನು ಬಂಧಿಸಲಾಗಿದೆ. ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



