ಉಡುಪಿ : ವಂದೇ ಮಾತರಂ ಜನಜಾಗೃತಿ ಅಭಿಯಾನ ಹಾಗೂ ಕಾಲ್ನಡಿಗೆ ಜಾಥಾ ಸೆ.7ರಂದು ಕುಂದಾಪುರದಲ್ಲಿ ನಡೆಯಲಿದ್ದು, ಇದರ ಕರಪತ್ರವನ್ನು 98 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠ್ಠಲ್ ಕಿಣಿಯವರು ಬಿಡುಗಡೆಗೊಳಿಸಿದರು. ಸೆ.7ರಂದು ಬೆಳಿಗ್ಗೆ 8.30ಕ್ಕೆ ಕುಂದಾಪುರ ಹೊಸ ಬಸ್ ನಿಲ್ದಾಣದಿಂದ ಜಾಥಾ ಆರಂಭವಾಗಲಿದ್ದು, ಸಂಜೆ 5 ಗಂಟೆಗೆ ಸಾಸ್ತಾನದ ಬಸ್ ನಿಲ್ದಾಣದ ಬಳಿ ಸಮಾರೋಪಗೊಳ್ಳಲಿದೆ.

ಮಂಗಳೂರಿನ ನಿವಾಸದಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಮಟ್ಟಾರು ವಿಠ್ಠಲ್ ಕಿಣಿಯವರು, ‘ವಂದೇ ಮಾತರಂ’ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸುವಲ್ಲಿ ಹೋರಾಡಿದ ರಾಷ್ಟ್ರಭಕ್ತರ ಮಂತ್ರವಾಗಿದೆ. ವಂದೇ ಮಾತರಂ ಹೆಸರಿನಲ್ಲಿ ನಡೆಯುತ್ತಿರುವ ಜನಜಾಗೃತಿ ಅಭಿಯಾನದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರೊಂದಿಗೆ ತಾವೂ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಇಡೀ ದೇಶ ವಂದೇ ಮಾತರಂ ಪರವಾಗಿ ಎದ್ದು ನಿಲ್ಲಬೇಕು. ಕುಂದಾಪುರದಲ್ಲಿ ನಡೆಯಲಿರುವ ಕಾಲ್ನಡಿಗೆ ಜಾಥಾ ರಾಷ್ಟ್ರಭಕ್ತರೆಲ್ಲರ ಸಹಕಾರದಿಂದ ಐತಿಹಾಸಿಕ ದಾಖಲೆಯಾಗಲಿ ಎಂದು ಅವರು ಆಶಿಸಿದರು. ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ಬ್ರಿಜೇಶ್ ಚೌಟ, ಪಕ್ಷದ ಮುಖಂಡರಾದ ರಮೇಶ್ ಕಂದೆಟ್ಟು, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.


