Thursday, August 27, 2026

spot_img

ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಭೂಗತ ಲೋಕದ ನಂಟು: ಸುಪಾರಿ ಕೃತ್ಯದ ಹಿಂದೆ ಹೇಮಂತ ಪೂಜಾರಿ ?

ಉಡುಪಿ: ಕಾಪು ತಾಲೂಕಿನ ಮುದರಂಗಡಿಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಯುಪಿಸಿಎಲ್ ಗುತ್ತಿಗೆದಾರ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಇದೀಗ ಭೂಗತ ಲೋಕದ ನಂಟು ಇರುವ ಶಂಕೆ ತನಿಖೆಯಲ್ಲಿ ಹೊರಬಿದ್ದಿದೆ. ಯುಪಿಸಿಎಲ್ ಗುತ್ತಿಗೆ ಕೈತಪ್ಪಿದ ಹಿನ್ನೆಲೆಯಲ್ಲಿ ಕಿಶೋರ್ ರಾಮ ಪೂಜಾರಿ ಸುಪಾರಿ ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಆ.7ರಂದು ಮುದರಂಗಡಿಯ ಸೈಂಟ್ ಕ್ಸೇವಿಯರ್ ಚರ್ಚ್ ಕಾಂಪ್ಲೆಕ್ಸ್ ಬಳಿ ಡೇವಿಡ್ ಡಿಸೋಜಾ ಅವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆರಂಭದಲ್ಲಿ ಪ್ರಕರಣದ ಹಿಂದೆ ಉತ್ತರ ಭಾರತದ ಕಂಪನಿಗಳ ವ್ಯವಹಾರಿಕ ವೈಷಮ್ಯವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಗುತ್ತಿಗೆ ವಿಚಾರವೇ ಹತ್ಯೆಗೆ ಪ್ರಮುಖ ಕಾರಣವಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುತ್ತಿಗೆ ಕೈತಪ್ಪಿದ್ದಕ್ಕೆ ಸುಪಾರಿ?

ಎರ್ಮಾಳು ನಿವಾಸಿ ಕಿಶೋರ್ ರಾಮ ಪೂಜಾರಿ ಈ ಹಿಂದೆ ಯುಪಿಸಿಎಲ್‌ನಲ್ಲಿ ಗುತ್ತಿಗೆದಾರನಾಗಿದ್ದ ಎನ್ನಲಾಗಿದೆ. ಸುಮಾರು ಆರು ತಿಂಗಳ ಹಿಂದೆ ಎರ್ಮಾಳಿನಲ್ಲಿ ಯುಪಿಸಿಎಲ್‌ನ ಪೈಪ್‌ಲೈನ್ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುತ್ತಿಗೆ ತನಗೆ ನೀಡುವಂತೆ ಕಂಪನಿಯವರ ಮೇಲೆ ಒತ್ತಡ ಹೇರಿದ್ದ ಎನ್ನಲಾಗಿದೆ. ಆದರೆ ಕಂಪನಿ ಗುತ್ತಿಗೆಯನ್ನು ಡೇವಿಡ್ ಡಿಸೋಜಾ ಅವರಿಗೆ ನೀಡಿತ್ತು. ಕೋಟ್ಯಂತರ ರೂ. ಮೊತ್ತದ ಗುತ್ತಿಗೆ ಕೈತಪ್ಪಿದ ಹಿನ್ನೆಲೆಯಲ್ಲಿ ಕಿಶೋರ್ ಪೂಜಾರಿ ಡೇವಿಡ್ ಹಾಗೂ ಯುಪಿಸಿಎಲ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಬಳಿಕ ಸುಮಾರು ₹10 ಲಕ್ಷಕ್ಕೆ ಡೇವಿಡ್ ಹತ್ಯೆಗೆ ಸುಪಾರಿ ನೀಡಲಾಗಿದ್ದು, ಸುಮಾರು ಮೂರು ತಿಂಗಳ ಕಾಲ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಣದ ಜಾಡು ಹಿಡಿದು ಆರೋಪಿಗಳ ಬಂಧನ

ಪ್ರಕರಣದ ತನಿಖೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಉತ್ತರ ಭಾರತ ಮೂಲದ ರಾಜು, ಬಿಹಾರ ಮೂಲದ ಅನ್ಮೋಲ್ ರಸ್ತೋಗಿ ಹಾಗೂ ಉತ್ತರಾಖಂಡ ಮೂಲದ ಜಿಯಾಹುಲ್ ಶೇಖ್ ಅವರನ್ನು ಪೊಲೀಸರು ಬಂಧಿಸಿದ್ದರು. ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಕಾಪು-ಎರ್ಮಾಳು ಮೂಲದ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ ಹಾಗೂ ಸದಾನಂದ ದೇವಾಡಿಗ ಅವರಿಂದ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ಈ ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿದ್ದ ಹಾಗೂ ಸುಪಾರಿ ನೀಡಿದ್ದ ವ್ಯಕ್ತಿಯಾಗಿ ಕಿಶೋರ್ ರಾಮ ಪೂಜಾರಿ ಹೆಸರು ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಪಾರಿ ಹಣದ ಹಣಕಾಸು ವ್ಯವಸ್ಥೆಯಲ್ಲಿ ಭಾಗಿಯಾಗಿದ್ದ ಬಿಹಾರ ಮೂಲದ ಸೂರಜ್ ಕುಮಾರ್‌ನನ್ನು ಪೊಲೀಸರು ಉತ್ತರಾಖಂಡದಲ್ಲಿ ಬಂಧಿಸಿದ್ದಾರೆ. ಆತನ ವಿಚಾರಣೆಯಿಂದ ಶೂಟರ್‌ಗಳನ್ನು ವ್ಯವಸ್ಥೆ ಮಾಡಿದ್ದ ಬಿಹಾರ ಮೂಲದ ಅನೂಜ್ ಬಗ್ಗೆ ಮಾಹಿತಿ ಲಭಿಸಿತ್ತು. ಬಳಿಕ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಅನೂಜ್‌ನನ್ನು ಬಂಧಿಸಲಾಯಿತು.

ಹೇಮಂತ ಪೂಜಾರಿ ಪಾತ್ರದ ಬಗ್ಗೆ ತನಿಖೆ

ಈ ಪ್ರಕರಣದಲ್ಲಿ ಕಿಶೋರ್ ಪೂಜಾರಿಯ ಸಹೋದರ ಹಾಗೂ ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿರುವ ಹೇಮಂತ ಪೂಜಾರಿ ಹೆಸರೂ ಕೇಳಿಬಂದಿದೆ. ತನ್ನ ಸಹೋದರನ ಮೂಲಕ ಕೃತ್ಯ ನಡೆಸಿರುವುದಾಗಿ ಕಿಶೋರ್ ಪೂಜಾರಿ ಹೇಳಿದ್ದಾನೆ ಎನ್ನಲಾಗಿದೆ. ಆದರೆ ಹೇಮಂತ ಪೂಜಾರಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾನೆ ಎಂಬುದು ಇನ್ನೂ ಖಚಿತವಾಗಿಲ್ಲ. ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಮಾತನಾಡುತ್ತಿಲ್ಲ ಎಂದು ಕಿಶೋರ್ ಹೇಳಿರುವುದರಿಂದ ಹೇಮಂತನ ಪಾತ್ರದ ಬಗ್ಗೆ ಮತ್ತಷ್ಟು ತನಿಖೆ ನಡೆಸಬೇಕಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಹೇಮಂತ ಪೂಜಾರಿ ಪ್ರಸ್ತುತ ಎಲ್ಲಿದ್ದಾನೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ನಡುವೆ ಪ್ರಕರಣದಲ್ಲಿ ಶೂಟರ್‌ಗಳನ್ನು ವ್ಯವಸ್ಥೆ ಮಾಡಿದ್ದ ಅನೂಜ್ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿರುವುದು ಪ್ರಕರಣದ ತನಿಖೆಯಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಒಟ್ಟಾರೆ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ಹಿಂದೆ ನಡೆದಿರುವ ಹಣಕಾಸಿನ ವ್ಯವಹಾರ, ಸುಪಾರಿ ಜಾಲ ಹಾಗೂ ಆರೋಪಿಗಳ ನಡುವಿನ ಸಂಪರ್ಕದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles