ಉಡುಪಿ : ಕಾಶೀಯಾತ್ರೆ ಪೂರ್ಣಗೊಳಿಸಿ ತಮ್ಮ ಸಹೋದರರೊಂದಿಗೆ ತಾನು ನಿಮಿತ್ತವಾಗಿ ಸಮಾರಾಧನೆ ಹಾಗೂ ಸಹಸ್ರಚಂದ್ರ ದರ್ಶನ ಪ್ರಯುಕ್ತ ಕಲಾರಾಧನೆ ನಡೆಸಿದ ಹೊನ್ನಾವರದ ಹಿಂಡಮನ ನಿವಾಸಿ, ಪ್ರಗತಿಪರ ಕೃಷಿಕ ಶಿವರಾಮ ಹೆಗಡೆ ಅವರು ಉಡುಪಿಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗಕ್ಕೆ ರೂ50 ಸಾವಿರ ದೇಣಿಗೆ ಸಮರ್ಪಿಸಿದರು. ಹೊನ್ನಾವರದ ಹಿರೇಶಂಭುಲಿಂಗ ಸಭಾಭವನದಲ್ಲಿ ಆಗಸ್ಟ್ 24ರಂದು ನಡೆದ ಕಾರ್ಯಕ್ರಮದಲ್ಲಿ ದೇಣಿಗೆ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಶಿವರಾಮ ಹೆಗಡೆ ಹಾಗೂ ಕುಟುಂಬದವರನ್ನು ಅಭಿನಂದಿಸಿ ಆಶೀರ್ವದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ವಹಿಸಿದ್ದರು. ಹೊನ್ನಾವರದ ಎಸ್ಡಿಎಂ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಅಭಿನಂದನಾ ಭಾಷಣ ಮಾಡಿದರು. ಸಂಸ್ಥೆಯ ಪರವಾಗಿ ಮುರಲಿ ಕಡೆಕಾರ್ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್ ಹಾಗೂ ದೇವಳದ ಆಡಳಿತ ಸಮಿತಿ ಮುಖ್ಯಸ್ಥ ಜಿ.ಆರ್. ಹೆಗಡೆ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸಂಸ್ಥೆಯ ಪರವಾಗಿ ಶಾಲು ಹಾಗೂ ಸ್ಮರಣಿಕೆಯೊಂದಿಗೆ ಶಿವರಾಮ ಹೆಗಡೆ ಅವರನ್ನು ಅಭಿನಂದಿಸಿದರು.

ನಾರಾಯಣ ಎಂ. ಹೆಗಡೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮಂಜುನಾಥ ಎಂ. ಹೆಗಡೆ ವಂದಿಸಿದರು. ಪ್ರದೀಪ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಸತ್ಯ ಹರಿಶ್ಚಂದ್ರ ಯಕ್ಷಗಾನ ಪ್ರದರ್ಶನ ನಡೆಯಿತು.


