ಉಡುಪಿ: ರೋಗಿಯನ್ನು ಕುಂದಾಪುರ ಆಸ್ಪತ್ರೆಗೆ ಬಿಟ್ಟು ವಾಪಸಾಗುತ್ತಿದ್ದ ಸರಕಾರಿ ಅಂಬುಲೆನ್ಸ್ಗೆ ಕಲ್ಲಿನಿಂದ ಹೊಡೆದು ಮುಂಭಾಗದ ಗಾಜು ಜಖಂಗೊಳಿಸಿದ ಘಟನೆ ಉಪ್ಪುಂದದಲ್ಲಿ ನಡೆದಿದೆ. ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಅಂಬುಲೆನ್ಸ್ ವಾಹನ ಚಾಲಕ ಬಿ. ಮೊಹಮ್ಮದ್ ಹುಸೈನ್ ಅವರು ರೋಗಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ವಾಪಸ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು ಕಡೆಗೆ ಬರುತ್ತಿದ್ದಾಗ ಸಂಜೆ ಉಪ್ಪುಂದ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖಮಂಟಪದ ಬಳಿ ಘಟನೆ ನಡೆದಿದೆ.

ಈ ವೇಳೆ ರಾಘವೇಂದ್ರ ಎಂಬಾತ ಅಂಬುಲೆನ್ಸ್ ವಾಹನಕ್ಕೆ ಕಲ್ಲಿನಿಂದ ಹೊಡೆದಿದ್ದು, ಪರಿಣಾಮ ವಾಹನದ ಮುಂಭಾಗದ ಗಾಜು ಜಖಂಗೊಂಡಿದೆ. ಘಟನೆಯಿಂದ ಸುಮಾರು 15 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಪ್ರೇಮಾನಂದ ಕೆ. ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


