ಉಡುಪಿ : ನಿತ್ಯ ಜೀವನದ ಅನುಭವಗಳಿಂದ ಸಾಹಿತ್ಯ ಹುಟ್ಟುತ್ತದೆ. ಸಾಹಿತಿ ನೀತಿ ಅಥವಾ ಧರ್ಮ ಬೋಧಕನಲ್ಲ; ಸಮಾಜದ ಅಂಕುಡೊಂಕುಗಳನ್ನು ತನ್ನ ಬರವಣಿಗೆಯ ಮೂಲಕ ತಿದ್ದುವ ಚಿಕಿತ್ಸಕ. ಬರವಣಿಗೆಯ ಮೂಲಕ ವಿಚಾರದ ಬೆಳಕು ಚೆಲ್ಲಿ ಅಜ್ಞಾನದ ಕತ್ತಲೆಯನ್ನು ದೂರ ಮಾಡುವ ಶಕ್ತಿ ಕವಿಗಳಲ್ಲಿದೆ ಎಂದು ಹಿರಿಯ ಲೇಖಕಿ ವಸಂತಿ ಶೆಟ್ಟಿ ಬ್ರಹ್ಮಾವರ ಹೇಳಿದರು.

ವಿದ್ಯಾವಾಚಸ್ಪತಿ ಬನ್ನಂಜೆ ಡಾ. ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ನಡೆದ ‘ಗ್ರಂಥಾಲಯದಲ್ಲಿ ಸಾಹಿತಿ ಸೌರಭ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿಗೆ ವ್ಯಥೆಪಡುವುದಕ್ಕಿಂತ ವ್ಯಥೆಯನ್ನು ಕಥೆಯಾಗಿ ರೂಪಿಸುವ ಶಕ್ತಿ ಇರುತ್ತದೆ. ಮಕ್ಕಳಲ್ಲಿ ಬಾಲ್ಯದಿಂದಲೇ ಓದುವ ಹವ್ಯಾಸ ಬೆಳೆಸಬೇಕು. ತಮ್ಮ ಜೀವನದ ಅನುಭವಗಳನ್ನು ಬರವಣಿಗೆಯ ಮೂಲಕ ದಾಖಲಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು.ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರ ಮುತುವರ್ಜಿಯಿಂದ ಹಿರಿಯ ಅನುಭವಸ್ಥರೊಂದಿಗೆ ಯುವಜನತೆಗೆ ಸಂವಾದ ಹಾಗೂ ಮಾರ್ಗದರ್ಶನಕ್ಕೆ ಅವಕಾಶ ದೊರೆಯುತ್ತಿದೆ. ಹಿರಿಯರಾದ ವಿ.ಎಸ್. ಆಚಾರ್ಯ ಅವರ ದೂರದೃಷ್ಟಿಯಿಂದ ಜಿಲ್ಲೆಗೆ ಸುಸಜ್ಜಿತ ಗ್ರಂಥಾಲಯ ದೊರೆತಿದ್ದು, ‘ಗ್ರಂಥಾಲಯದಲ್ಲಿ ಸಾಹಿತಿ ಸೌರಭ’ ಉತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಮಕ್ಕಳಲ್ಲಿ ಓದುವ ಮತ್ತು ಬರೆಯುವ ಸಂಸ್ಕೃತಿ ಬೆಳೆಸುವುದರ ಜತೆಗೆ ಯುವಜನತೆಗೆ ಸಾಹಿತಿಗಳ ಪರಿಚಯ ಮಾಡಿಕೊಡುವ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು. ಮುಖ್ಯ ಗ್ರಂಥಾಲಯ ಅಧಿಕಾರಿ ನಮಿತಾ ಬಿ. ಸ್ವಾಗತಿಸಿದರು. ಗ್ರಂಥಪಾಲಕಿ ವನಿತಾ ಕೆ. ವಂದಿಸಿದರು. ಶ್ಯಾಮಲಾ ಸಾಹಿತಿಯ ಪರಿಚಯ ನೀಡಿದರು. ಪ್ರೇಮ ನಿರೂಪಿಸಿದರು. ಡಾ. ಜಿ. ಶಂಕರ್ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗ್ರಂಥಾಲಯ ಸಿಬ್ಬಂದಿ ಉಪಸ್ಥಿತರಿದ್ದರು.


