ಉಡುಪಿ: ಶೈಕ್ಷಣಿಕ ವಲಯದಲ್ಲಿ ಉತ್ತಮ ಶಿಕ್ಷಕರ ಕೊರತೆ ಹೆಚ್ಚಿದೆ. ಪದವೀಧರರು ಶಿಕ್ಷಕರಾಗುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡಲು ಮುಂದಾಗಬೇಕೆಂದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ.ಪಿ.ಎಲ್ ಧರ್ಮ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಶನಿವಾರ ನಗರದ ಪೂರ್ಣ ಪ್ರಜ್ಞ ಕಾಲೇಜಿನ (ಸ್ವಾಯತ್ತ) ವಿಶೇಷವಾಗಿ ನಿರ್ಮಿಸಲಾದ ಶ್ರೀ ವಿಬುಧೇಶತೀರ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಎ.9 ರಿಂದ 12 ರವರೆಗೆ ನಡೆದ 2024-25ನೇ ಸಾಲಿನ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಂಗಳೂರು ವಿವಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದರೂ, ಸಾಧನೆಗೇನು ಕೊರತೆ ಇಲ್ಲ. ಮೌಲ್ಯವನ್ನು ತಿಳಿಸುತ್ತಿದ್ದ ದೈಹಿಕ ಶಿಕ್ಷಕರು, ಸ್ವಾಯತ್ತ ಕಾಲೇಜ್ಗಳಲ್ಲಿ ಉಳಿಯುತ್ತಿರುವುದು ದುಃಖದ ಸಂಗತಿಯಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ದೇಶದಲ್ಲೇ ಉದ್ಯೋಗ ನಾಡಬೇಕು. ಪ್ರತಿಭೆಗಳ ವಿದೇಶಿ ಪಲಾಯನ ತಪ್ಪಬೇಕು. ವಿದ್ಯಾರ್ಥಿಗಳು ಸಮಾಜಕ್ಕೆ ಏನನ್ನು ಒಳ್ಳೆದು ಮಾಡಬಹುದು ಎಂಬುದರ ಬಗ್ಗೆ ಯೋಚಿಸಬೇಕು ಎಂದರು. ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಪಠ್ಯದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ಪಠ್ಯೇತರ ಭಾಗದಲ್ಲಿ ಹೆಚ್ಚಬೇಕು. ಖೋಖೋ ಕ್ರೀಡೆಗೆ ಕಾಲೇಜಿನ ಹಂತದಲ್ಲಿ ಇನ್ನಷ್ಟು ಮಹತ್ವ ನೀಡುವ ಕೆಲಸ ಆಗಬೇಕು ಎಂದರು.

ವೇದಿಕೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಶ್ರೀಗಳ ಆಪ್ತ ಕಾರ್ಯದರ್ಶಿ (ಬೆಂಗಳೂರು) ಗೋಪಾಲ ಸಬರಾಯ, ಪಿಐಎಂ ನಿರ್ದೇಶಕ ಡಾ.ಪಿ.ಶ್ರೀರಮಣ ಐತಾಳ್, ಗೌರವ ಕಾರ್ಯದರ್ಶಿ ಡಾ.ಎ.ಪಿ. ಭಟ್, ಪ್ರಾಂಶುಪಾಲ ಡಾ.ಎಲ್. ರಾಮು, ಸಂಸ್ಥೆಯ ಕೋಶಾಧಿಕಾರಿಗಳಾದ ಪ್ರಶಾಂತ್ ಹೊಳ್ಳ, ಗಣೇಶ್ ಹೆಬ್ಬಾರ್, ಜಿ.ವಿ.ಕೃಷ್ಣ ಉಪಸ್ಥಿತರಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್ ಸ್ವಾಗತಿಸಿದರು. ಕ್ರೀಡಾಕೂಟದ ಸಂಯೋಜಕ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್ ವಂದಿಸಿದರು. ಸಂಯೋಜನ ಕಾರ್ಯದರ್ಶಿ ಹಾಗೂ ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಜೆರಾಲ್ಡ್ ಸಂತೋಷ ಡಿ”ಸೋಜಾ ವರದಿ ವಾಚಿಸಿದರು. ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಅಪೂರ್ವ ಮೇರಿ ಓಸ್ಟಾ ನಿರೂಪಿಸಿದರು.

ಬೆಸ್ಟ್ ಡಿಫೆಂಡರ್ ಮಂಗಳೂರು ವಿವಿಯ ನಿಖಿಲ್.ಬಿ, ಬೆಸ್ಟ್ ಚೇಸರ್ ಮಂಗಳೂರು ವಿವಿಯ ದೀಕ್ಷಿತ್, ಬೆಸ್ಟ್ ಆಲ್ರೌಂಡರ್ ಮುಂಬೈ ವಿವಿಯ ಆಕಾಶ್ ಖದಮ್, ತೃತೀಯ ಸ್ಥಾನ ಮಹಾರಾಷ್ಟ್ರದ ನಾಂದೆಡ್ನ ಎಸ್ಆರ್ಟಿಎಮ್ ವಿವಿ ಮತ್ತು ಮಹಾರಾಷ್ಟ್ರದ ಬಿಎಎಮ್ಯು ವಿವಿ, ರನ್ನರ್ ಆಪ್ ಮುಂಬೈ ವಿವಿ ಹಾಗು ಆತೀಥೆಯ ಮಂಗಳೂರು ವಿವಿ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ.