ಉಡುಪಿ: ರಾಮನ ಸತ್ಯ, ತ್ಯಾಗ, ಕರುಣೆ, ಸೇವೆ ಹಾಗೂ ಸಾಮರಸ್ಯದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕುಟುಂಬದಲ್ಲಿ ಶಾಂತಿ, ಸಮಾಜದಲ್ಲಿ ಸಾಮರಸ್ಯ ಹಾಗೂ ರಾಷ್ಟ್ರದಲ್ಲಿ ಏಕತೆಯನ್ನು ಮತ್ತಷ್ಟು ಬಲಪಡಿಸಬಹುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಉಡುಪಿಯ ರಾಮಕಥಾ ಸಮಿತಿ ವತಿಯಿಂದ ಆಯೋಜಿಸಿದ್ದ ಸಂತ ಶ್ರೀ ಮುರಾರಿ ಬಾಪು ಅವರ ರಾಮಕಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀಕೃಷ್ಣನ ಭಕ್ತಿಯ ನಿರಂತರ ಹರಿವು ಇರುವ ಉಡುಪಿಯ ಪವಿತ್ರ ನೆಲದಲ್ಲಿ ರಾಮಕಥೆಯನ್ನು ಆಲಿಸುವ ಅವಕಾಶ ದೊರೆತಿರುವುದು ಸಂತೋಷದ ಸಂಗತಿ ಎಂದರು.

ಮುರಾರಿ ಬಾಪು ಅವರು ಸರಳ ಹಾಗೂ ಹೃದಯಸ್ಪರ್ಶಿ ನಿರೂಪಣೆಯ ಮೂಲಕ ಶ್ರೀರಾಮನ ಆದರ್ಶಗಳು, ಪ್ರೀತಿ, ಕರುಣೆ, ಸತ್ಯ, ಸೇವೆ ಮತ್ತು ಸಾಮರಸ್ಯದ ಸಂದೇಶವನ್ನು ದೇಶ-ವಿದೇಶಗಳಲ್ಲಿ ಪಸರಿಸುತ್ತಿರುವುದು ಶ್ಲಾಘನೀಯ ಎಂದರು.

ರಾಮಾಯಣವು ಸತ್ಯ, ಕರ್ತವ್ಯ, ತ್ಯಾಗ, ಪ್ರೀತಿ ಹಾಗೂ ಸೇವೆಯ ಶಾಶ್ವತ ಸಂದೇಶ ನೀಡುತ್ತದೆ. ಕಠಿಣ ಪರಿಸ್ಥಿತಿಗಳಲ್ಲಿಯೂ ತತ್ವ ಹಾಗೂ ಕರ್ತವ್ಯದಿಂದ ವಿಮುಖರಾಗಬಾರದು ಎಂಬುದನ್ನು ಶ್ರೀರಾಮನ ಜೀವನ ಕಲಿಸುತ್ತದೆ. ಶಬರಿ, ಸುಗ್ರೀವ ಹಾಗೂ ಹನುಮಂತರಿಗೆ ಶ್ರೀರಾಮ ನೀಡಿದ ಗೌರವವು ಸಾಮಾಜಿಕ ಸಮಾನತೆ, ಏಕತೆ ಮತ್ತು ಒಳಗೊಳ್ಳುವಿಕೆಯ ಆದರ್ಶವನ್ನು ಸಾರುತ್ತದೆ ಎಂದು ಹೇಳಿದರು.

ಉಡುಪಿ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಪ್ರಮುಖ ಕೇಂದ್ರವಾಗಿದ್ದು, ಸಂತ ಮಧ್ವಾಚಾರ್ಯರ ಪರಂಪರೆ ಹಾಗೂ ಶ್ರೀಕೃಷ್ಣ ಭಕ್ತಿಗೆ ಹೆಸರುವಾಸಿಯಾಗಿದೆ. ಇದೇ ನೆಲದಲ್ಲಿ ರಾಮಕಥೆಯ ಸಂದೇಶ ಮೊಳಗುತ್ತಿರುವುದು ಭಾರತದ ವೈವಿಧ್ಯಮಯ ಆಧ್ಯಾತ್ಮಿಕ ಪರಂಪರೆಯ ಪ್ರತೀಕ ಎಂದರು. ಭಾರತೀಯ ಸಂಸ್ಕೃತಿ ಸಾರುವ ವಸುಧೈವ ಕುಟುಂಬಕಂ ಮತ್ತು ಸರ್ವೇ ಭವಂತು ಸುಖಿನಃ ಎಂಬ ಸಾರ್ವತ್ರಿಕ ಸಂದೇಶವನ್ನು ವಿಶ್ವದಾದ್ಯಂತ ಪಸರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂತರು ಹಾಗೂ ಮಹಾತ್ಮರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ರಾಜ್ಯಪಾಲರು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಪ್ರವೀಣ್ ಕಾಂಜಿ ತನ್ನಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


