ಉಡುಪಿ : ಕಾರ್ಕಳ–ಮಾಳ ಮಾರ್ಗದ ರಾಷ್ಟ್ರೀಯ ಹೆದ್ದಾರಿ–169ರ ಕಾಮಗಾರಿ ಅಂತಿಮ ಹಂತದಲ್ಲಿರುವಾಗ ರಸ್ತೆ ಸುರಕ್ಷತೆಗೆ ಅಳವಡಿಸಲು ಸಂಗ್ರಹಿಸಿಡಲಾಗಿದ್ದ 20ಕ್ಕೂ ಹೆಚ್ಚು ದಾರಿ ಸೂಚಕ ಹಾಗೂ ವೇಗಮಿತಿ ಫಲಕಗಳು ಮತ್ತು ಕಬ್ಬಿಣದ ಕಂಬಗಳು ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಾರ್ಕಳ ಬೈಪಾಸ್ನಿಂದ ಮಾಳ ಗೇಟ್ವರೆಗಿನ ವ್ಯಾಪ್ತಿಯಲ್ಲಿ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಕೆಲವು ಸ್ಥಳಗಳಲ್ಲಿ ಸೂಚನಾ ಫಲಕಗಳೊಂದಿಗೆ ಅವುಗಳನ್ನು ಅಳವಡಿಸಲು ಬಳಸಲಾಗಿದ್ದ ಕಬ್ಬಿಣದ ಕಂಬಗಳನ್ನೇ ಕತ್ತರಿಸಿ ಕೊಂಡೊಯ್ದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ರಸ್ತೆ ಸುರಕ್ಷತೆಗೆ ಅತ್ಯಂತ ಅಗತ್ಯವಾಗಿರುವ ಸೂಚನಾ ಫಲಕಗಳ ಕಳ್ಳತನದಿಂದ ವಾಹನ ಸವಾರರಿಗೆ ದಾರಿ ಗುರುತಿಸುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದ್ದು, ಅಪಘಾತದ ಅಪಾಯವೂ ಹೆಚ್ಚುವ ಸಾಧ್ಯತೆ ಇದೆ ಎಂದು ಕಾಮಗಾರಿ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಕಳ್ಳರು ಕಬ್ಬಿಣದ ವಸ್ತುಗಳನ್ನು ಗುಜರಿಗೆ ಮಾರಾಟ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಸಿದ್ಧತೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಆರಂಭಿಸಲಾಗಿದೆ.

ಈ ಕಳ್ಳತನದ ಘಟನೆಯು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸುರಕ್ಷತೆ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಣೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


