ಉಡುಪಿ : ಹಿರಿಯ ಸಾಹಿತಿ, ಆಯುರ್ವೇದ ವೈದ್ಯ ಹಾಗೂ ಅಕ್ಷರ ಲೋಕದ ಕಾಯಕಯೋಗಿ ಡಾ. ನಾ. ಮೊಗಸಾಲೆ ಅವರನ್ನು ಭೇಟಿ ಮಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ 12 ವರ್ಷಗಳ ಸಾಧನೆ ಮತ್ತು ಸೇವೆಯನ್ನು ಒಳಗೊಂಡ ಪುಸ್ತಕವನ್ನು ಅವರಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ನಾ. ಮೊಗಸಾಲೆ ಅವರು ಅಕ್ಷರ ಲೋಕದ ಕಾಯಕಯೋಗಿ. ಕಾರ್ಕಳ ಸಮೀಪದ ಕಾಂತಾವರ ಗ್ರಾಮದಲ್ಲಿ ಜ್ಞಾನದ ಹಸಿರನ್ನು ಬೆಳೆಸಿದ ಅವರು, ತಮ್ಮ ಬದುಕಿನ ಬಹುಪಾಲು ಸಮಯವನ್ನು ಬರವಣಿಗೆ ಹಾಗೂ ಸಾಹಿತ್ಯ ಸೇವೆಗೆ ಮೀಸಲಿಟ್ಟಿದ್ದಾರೆ. 82ರ ಹರೆಯದಲ್ಲಿಯೂ ಅವರ ಸಾಹಿತ್ಯ ಕೃಷಿ ನಿರಂತರವಾಗಿ ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇರಳದ ಕಾಸರಗೋಡಿನಲ್ಲಿ ಜನಿಸಿದ ಡಾ. ನಾ. ಮೊಗಸಾಲೆ ಅವರು ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಾ, ಪತ್ನಿ ಪ್ರಮೀಳಾ ಅವರೊಂದಿಗೆ ಕಾಂತಾವರದಲ್ಲಿ ಬದುಕು ಕಟ್ಟಿಕೊಂಡರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಅವರ ಕವನ, ಕಥೆ, ಕಾದಂಬರಿ ಹಾಗೂ ವಿವಿಧ ಕೃತಿಗಳು ಸಾಹಿತ್ಯ ಲೋಕದಲ್ಲಿ ಗಮನಾರ್ಹ ಸ್ಥಾನ ಪಡೆದಿವೆ. ಅವರಿಗೆ ಸಂದಿರುವ ಪ್ರಶಸ್ತಿ, ಪುರಸ್ಕಾರ ಹಾಗೂ ಗೌರವಗಳೂ ಅಪಾರವಾಗಿವೆ ಎಂದು ಕೋಟ ಹೇಳಿದರು. ಬರಹ ಮತ್ತು ಸಾಹಿತ್ಯದ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಮೊಗಸಾಲೆಯವರ ದೇಶಪ್ರೇಮವನ್ನು ಕೋಟ ಸ್ಮರಿಸಿದರು. ಹಿಂದುತ್ವದ ಸಂಘಟನೆಗೆ ಶಕ್ತಿಯ ಕೊರತೆಯಿದ್ದ ಕಾಲಘಟ್ಟದಲ್ಲಿ ಊರೂರು ಸಂಚರಿಸಿ ಸಂಘಟನೆಯ ಕಾರ್ಯಕ್ಕೆ ಬೆಂಬಲವಾಗಿ ನಿಂತು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದವರು ಎಂದು ಹೇಳಿದರು.

ನಾಡು ಮತ್ತು ದೇಶಕ್ಕಾಗಿ ನಾ. ಮೊಗಸಾಲೆಯವರು ಅಂದು ಮಾಡಿದ ಪರಿಶ್ರಮವನ್ನು ನೆನಪಿಸಿಕೊಂಡು, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ 12 ವರ್ಷಗಳ ಸಾಧನೆಯ ಪುಸ್ತಕವನ್ನು ಅವರಿಗೆ ಸಮರ್ಪಿಸುವ ಅವಕಾಶ ದೊರೆತಿರುವುದು ಸಾರ್ಥಕತೆಯ ಕ್ಷಣದ ಅನುಭವ ನೀಡಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಈ ಸಂದರ್ಭದಲ್ಲಿ ಮಣಿರಾಜ್ ಶೆಟ್ಟಿ, ಸಂಘಟನೆಯ ಮುಖಂಡರಾದ ನವೀನ್ ನಾಯಕ್, ಮಹಾವೀರ ಹೆಗ್ಡೆ, ಬೋಳ ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


