ಉಡುಪಿ : ತಾಲೂಕಿನ ಬಸ್ರೂರು ಗ್ರಾಮದ ಮೂಡ್ಕೇರಿ ಪ್ರದೇಶದಲ್ಲಿರುವ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿಗೆ ಅನಧಿಕೃತವಾಗಿ ಪ್ರವೇಶಿಸಿದ ಘಟನೆಗೆ ಸಂಬಂಧಿಸಿ ಸುಮಾರು 15 ಜನರ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್ 12ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಿ.ಟಿ. ಮಂಜು ಬಡಬಾಳು (ಸಿದ್ದಾಪುರ), ಕೇಶವ, ರಾಜು, ಕೃಷ್ಣ ಸೇರಿದಂತೆ ಇತರರು ಗರಡಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದರೆಂದು ಆರೋಪಿಸಲಾಗಿದೆ. ಈ ವೇಳೆ ಗರಡಿಗೆ ಸಂಬಂಧಿಸಿದ ಅಶೋಕ ಪೂಜಾರಿ (48) ಅವರು ಪ್ರಶ್ನಿಸಿದಾಗ, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದರೆಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯ ವೇಳೆ ಗರಡಿಯೊಳಗೆ ನಗದು ಮತ್ತು ಚಿನ್ನ ಇರುವುದಾಗಿ ತಿಳಿದುಬಂದಿದ್ದು, ಬೀಗ ಮುರಿದ ಪರಿಣಾಮ ಸುಮಾರು ನಷ್ಟ ಉಂಟಾಗಿದೆ ಎನ್ನಲಾಗಿದೆ. ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



