ಉಡುಪಿ : ಇಂದ್ರಾಳಿ ರೈಲು ನಿಲ್ದಾಣದ ಪ್ರವೇಶದ್ವಾರದ ಮೇಲ್ಭಾಗದ ಗೋಪುರದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಅಪರಿಚಿತ ಯುವಕನನ್ನು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಸಾಹಸದಿಂದ ರಕ್ಷಿಸಿದ ಘಟನೆ ನಡೆದಿದೆ.

ರಕ್ಷಿಸಲ್ಪಟ್ಟ ಯುವಕನನ್ನು ಪಶ್ಚಿಮಬಂಗಾಳ ರಾಜ್ಯದ ದಿನಜಪುರ ಮೂಲದ ಸುಬರತ್ ಮರ್ಮು (28) ಎಂದು ಗುರುತಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಸಹೋದರಿಯ ಅಗಲಿಕೆಯಿಂದ ಮನೋವ್ಯಥೆಗೆ ಒಳಗಾಗಿದ್ದಾಗಿ ಯುವಕ ತಿಳಿಸಿದ್ದಾನೆ. ಸಂಬಂಧಿಕರನ್ನು ಸಂಪರ್ಕಿಸಲು ಉಡುಪಿ ಜಿಲ್ಲಾಸ್ಪತ್ರೆಗೆ ಮಾಹಿತಿ ನೀಡಲಾಗಿದೆ.


ಯುವಕ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ ಎಂಬ ಮಾಹಿತಿ ದೊರಕಿರುವ ಹಿನ್ನೆಲೆ, ರೈಲ್ವೆ ಪೊಲೀಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದರು. ಸ್ಥಳಕ್ಕೆ ತಕ್ಷಣ ಆಗಮಿಸಿದ ಒಳಕಾಡು ಅವರು, ಯುವಕನ ವರ್ತನೆಯಲ್ಲಿ ಉಗ್ರತೆ ಕಂಡು ಬಂದ ಕಾರಣ ಸಜಿತ್ ಅವರ ಸಹಾಯದೊಂದಿಗೆ ಆತನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಈ ಕಾರ್ಯಾಚರಣೆಯಲ್ಲಿ ಆರ್ಪಿಎಫ್ ಸಿಬ್ಬಂದಿ ಜೀನಾ ಪಿಂಟೋ ಭಾಗಿಯಾಗಿದ್ದರು.



