ಉಡುಪಿ: ಕನ್ನಡ ಚಲನಚಿತ್ರ ರಂಗದ ವರನಟ ಡಾ. ರಾಜಕುಮಾರ್ ಅವರ ಏಪ್ರಿಲ್ 24ರಂದು ನಡೆಯಲಿರುವ 97ನೇ ಜನ್ಮದಿನದ ಅಂಗವಾಗಿ, ಕಲಾವಿದ ಹಾಗೂ ಸಾಮಾಜಿಕ ಕಾರ್ಯಕರ್ತ ಸರಳೆಬೆಟ್ಟು ಗಣೇಶ್ ರಾಜ್ ಅವರು ವಿಶಿಷ್ಟ ಕಲಾಕೃತಿಯನ್ನು ರಚಿಸಿದ್ದಾರೆ.

ಒಣಗಿದ ಅಶ್ವತ್ಥ ಎಲೆಯಲ್ಲಿ ಸೂಕ್ಷ್ಮ ರೇಖಾಚಿತ್ರದ ಮೂಲಕ ಡಾ. ರಾಜಕುಮಾರ್ ಅವರ ಭಾವಚಿತ್ರವನ್ನು ಮೂಡಿಸಿರುವುದು ಕಲಾಭಿಮಾನಿಗಳ ಗಮನ ಸೆಳೆಯುತ್ತಿದೆ. ಅತಿ ನಾಜೂಕಾದ ಮೇಲ್ಮೈಯಲ್ಲಿ ಈ ರೀತಿಯ ಕಲಾಕೃತಿ ಸೃಷ್ಟಿಸಿರುವುದು ಅವರ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.

ಗಣೇಶ್ ರಾಜ್ ಅವರು ಹಿಂದೆ ಉಡುಪಿಯ ರಾಜ್ ಅಭಿಮಾನಿ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರೂ, ವರನಟನ ಮೇಲೆ ಇರುವ ಅಭಿಮಾನದಿಂದಲೇ ಈ ವಿಶಿಷ್ಟ ಚಿತ್ರವನ್ನು ರಚಿಸಿರುವುದಾಗಿ ತಿಳಿಸಿದ್ದಾರೆ. ರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ಈ ಕಲಾಕೃತಿ ಅಭಿಮಾನಿಗಳಲ್ಲಿ ವಿಶೇಷ ಮೆಚ್ಚುಗೆ ಪಡೆದಿದೆ.



