ಉಡುಪಿ : ಮರವಂತೆಯ ನಿರೋಣಿ ಪ್ರದೇಶದಲ್ಲಿ ಕಾರು ಕಳವು ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳು ಸ್ಥಳದಲ್ಲೇ ಬೈಕ್ ಬಿಟ್ಟು ಪರಾರಿಯಾದ ಘಟನೆ ಮೇ 11ರಂದು ರಾತ್ರಿ ಸಂಭವಿಸಿದೆ.

ಮರವಂತೆಯ ನಿವಾಸಿ ರಿತೇಶ್ ದೇವಾಡಿಗ ಅವರು ನಿರೋಣಿಯಲ್ಲಿ ಶಾಮಿಯಾನ ಅಂಗಡಿ ನಡೆಸುತ್ತಿದ್ದು, ಮೆಹಂದಿ ಕಾರ್ಯಕ್ರಮಕ್ಕಾಗಿ ಹಾಕಿದ್ದ ಶಾಮಿಯಾನವನ್ನು ಅನ್ಲೋಡ್ ಮಾಡಲು ರಾತ್ರಿ ಸುಮಾರು 11.15ರ ವೇಳೆಗೆ ಅಂಗಡಿ ಕಡೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಅವರ ಬಾವ ಗೋಪಾಲ ದೇವಾಡಿಗ ಅವರು ಸಮೀಪದಲ್ಲಿ ನಿಲ್ಲಿಸಿದ್ದ ಕಾರನ್ನು ಇಬ್ಬರು ಅಪರಿಚಿತರು ಕಳವು ಮಾಡಲು ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ.

ರಿತೇಶ್ ದೇವಾಡಿಗ ಅವರು ಸ್ಥಳಕ್ಕೆ ಬರುತ್ತಿರುವುದನ್ನು ಕಂಡ ಆರೋಪಿಗಳು ಅವರನ್ನು ತಳ್ಳಿಹಾಕಿ, ಕೃತ್ಯಕ್ಕೆ ಬಳಸಿದ್ದ ಬೈಕ್ನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



