ಉಡುಪಿ : ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅವರ ಇತ್ತೀಚಿನ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ, ರಾಮಮಂದಿರ ಮತ್ತು ಶ್ರೀರಾಮನ ಕುರಿತು ಕಾಂಗ್ರೆಸ್ನ ಹಿಂದಿನ ನಿಲುವನ್ನು ನೆನಪಿಸಿಕೊಂಡರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದವರು, ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಬಹಿಷ್ಕರಿಸಿ ಕಪ್ಪುಪಟ್ಟಿ ಧರಿಸಿದ್ದವರು ಹಾಗೂ ಶಿಲಾನ್ಯಾಸದ ವೇಳೆ ರಕ್ತಪಾತವಾಗಲಿದೆ ಎಂದು ಹೇಳಿದ್ದವರು ಈಗ ಶ್ರೀರಾಮನ ಕುರಿತು ಮಾತನಾಡುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ವ್ಯಂಗ್ಯವಾಡಿದರು. ಬಾಬರಿ ಮಸೀದಿ ಧ್ವಂಸದ ಸಂದರ್ಭ ರಾಮಭಕ್ತರ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಸರಯೂ ನದಿಗೆ ಎಸೆದ ಘಟನೆಗಳ ಇತಿಹಾಸವನ್ನು ಮರೆತಬಾರದು ಎಂದು ಅವರು ಹೇಳಿದರು.

ಶ್ರೀರಾಮ ಮಂದಿರದ ಕಾಣಿಕೆ ಹುಂಡಿಯ ಹಣ ದುರುಪಯೋಗವಾಗಿರುವ ಆರೋಪವನ್ನು ಎಲ್ಲ ರಾಮಭಕ್ತರೂ ಖಂಡಿಸುತ್ತಾರೆ. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದ್ದು, ದುರುಪಯೋಗಗೊಂಡ ಹಣವನ್ನು ಬಡ್ಡಿ ಸಮೇತ ವಸೂಲು ಮಾಡುವುದರ ಜೊತೆಗೆ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಂಡು ಶ್ರೀರಾಮನಿಗೆ ನ್ಯಾಯ ಒದಗಿಸುತ್ತಾರೆ ಎಂಬ ವಿಶ್ವಾಸ ಎಲ್ಲ ರಾಮಭಕ್ತರಲ್ಲಿದೆ ಎಂದರು. ಕಾಂಗ್ರೆಸ್ ನಾಯಕರಲ್ಲಿ ಶ್ರೀರಾಮನ ಕುರಿತು ಈಗ ವ್ಯಕ್ತವಾಗುತ್ತಿರುವ ಭಕ್ತಿ ಮತ್ತು ಗೌರವವನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ಇದೇ ರೀತಿಯ ನಿಲುವನ್ನು ಜ್ಞಾನವಾಪಿ, ಮಥುರ ಸೇರಿದಂತೆ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ಹೇಳಲಾಗುತ್ತಿರುವ ಇತರ ವಿಷಯಗಳಲ್ಲಿಯೂ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.


