ಉಡುಪಿ : ಬಿಡದಿ ಟೌನ್ಶಿಪ್ ಯೋಜನೆ ಕುರಿತು ವ್ಯಕ್ತವಾಗುತ್ತಿರುವ ವಿರೋಧದ ನಡುವೆಯೇ, ಅಭಿವೃದ್ಧಿ ಕಾರ್ಯಗಳಿಗೆ ಆರಂಭದಲ್ಲಿ ಆಕ್ಷೇಪಗಳು ಬರುವುದು ಸಹಜ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಗಾಂಧಿ ಅವರು ಕಲರ್ ಟಿವಿಯನ್ನು ಪರಿಚಯಿಸಿದಾಗಲೂ ವಿರೋಧ ವ್ಯಕ್ತವಾಗಿತ್ತು. ರಾಜೀವ್ ಗಾಂಧಿ ಕಂಪ್ಯೂಟರ್ ತಂದಾಗಲೂ ಟೀಕೆಗಳು ಕೇಳಿಬಂದಿದ್ದವು. ಆದರೆ ಕಾಲಕ್ರಮೇಣ ಅವು ಸಮಾಜದ ಅಭಿವೃದ್ಧಿಯ ಭಾಗವಾಗಿವೆ ಎಂದು ಹೇಳಿದರು.

ಯಾವುದೇ ಅಭಿವೃದ್ಧಿ ಯೋಜನೆ ಆಕ್ಷೇಪಗಳಿಲ್ಲದೆ ಜಾರಿಯಾಗಿರುವ ಉದಾಹರಣೆಗಳಿಲ್ಲ. ಜಿಲ್ಲೆ, ರಾಜ್ಯ ಹಾಗೂ ದೇಶ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಾದರೆ ಸ್ಯಾಟಲೈಟ್ ಟೌನ್ಗಳಂತಹ ಆಧುನಿಕ ನಗರಾಭಿವೃದ್ಧಿ ಯೋಜನೆಗಳು ಅಗತ್ಯವಾಗಿದ್ದು, ಇಂತಹ ಯೋಜನೆಗಳು ಯಾವುದಾದರೂ ಒಂದು ಸ್ಥಳದಲ್ಲಿ ಆರಂಭವಾಗಲೇಬೇಕು ಎಂದರು.

ಬಿಡದಿ ಟೌನ್ಶಿಪ್ ಸಂಬಂಧ ಉದ್ಭವಿಸಿರುವ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿ ಸೂಕ್ತವಾಗಿ ಬಗೆಹರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಮುಂದಿನ ಪೀಳಿಗೆಗಾಗಿ ಆಧುನಿಕ ತಂತ್ರಜ್ಞಾನ ಹಾಗೂ ಉತ್ತಮ ಮೂಲಸೌಕರ್ಯ ಹೊಂದಿರುವ ರಾಜ್ಯವನ್ನು ನಿರ್ಮಿಸುವ ಅಗತ್ಯವಿದೆ ಎಂದರು. ಪ್ರಸ್ತುತ ಕೃಷಿ ಭೂಮಿಯ ಸ್ಥಿತಿ ಮುಂದೆಯೂ ಇದೇ ರೀತಿಯಲ್ಲಿ ಉಳಿಯುತ್ತದೆಯೇ ಎಂಬ ಪ್ರಶ್ನೆ ಎತ್ತಿದ ಅವರು, ಭವಿಷ್ಯದಲ್ಲಿ ಅಭಿವೃದ್ಧಿಯ ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳು ಅನಿವಾರ್ಯವಾಗಲಿವೆ. ಭೂಮಿ ನೀಡಲು ಸಮ್ಮತಿಸುವವರಿಂದ ಮಾತ್ರ ಭೂಸ್ವಾಧೀನ ನಡೆಯಲಿದ್ದು, ಈ ಪ್ರಕ್ರಿಯೆಯನ್ನು ಸರ್ಕಾರವೇ ನಿಯಮಾನುಸಾರ ನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.


