ಉಡುಪಿ : ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ಸಾಲ ಪಡೆದು ಬ್ಯಾಂಕ್ಗೆ ವಂಚನೆ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಪು ತಾಲೂಕಿನ ನಡ್ಸಾಲು ಗ್ರಾಮದ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಪಡುಬಿದ್ರಿ ಶಾಖೆಯಲ್ಲಿ ಈ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್ನ ಶಾಖಾ ಮುಖ್ಯಸ್ಥರಾಗಿರುವ ಪ್ರದೀಪ್ ಕುಮಾರ್ (31) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಆರೋಪಿ ರಾಜೀವ್ ಕಲಾಯತಿನಲ್ಕುಜಿಯಿಲ್ ಕುಟ್ಟಪ್ಪನ್ ಎಂಬಾತ 2022ರ ಸೆಪ್ಟೆಂಬರ್ 21ರಂದು ಎಲ್ಎನ್ಎಪಿಜಿ ಯೋಜನೆಯಡಿ ಜೆ.ಎಲ್ ಖಾತೆ ತೆರೆಯಿಸಿ, 103.750 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಡವಿಟ್ಟು ರೂ3.49 ಲಕ್ಷ ಸಾಲ ಪಡೆದಿದ್ದಾನೆ ಎನ್ನಲಾಗಿದೆ. ಇತ್ತೀಚೆಗೆ ಆರೋಪಿಯ ವಿರುದ್ಧ ಇತರ ಬ್ಯಾಂಕ್ಗಳಲ್ಲಿಯೂ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದಿರುವ ಪ್ರಕರಣಗಳು ದಾಖಲಾಗಿರುವ ಮಾಹಿತಿ ಬ್ಯಾಂಕ್ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಅಧಿಕಾರಿಗಳು ಆತ ಅಡವಿಟ್ಟಿದ್ದ ಆಭರಣಗಳನ್ನು ಮರುಪರಿಶೀಲನೆಗೆ ಕಳುಹಿಸಿದ್ದರು.

ಮೆಜರ್ಸ್ ಸುಮೇರು ಗ್ಲೋಬಲ್ ಸಪೋರ್ಟ್ ಸೊಲುಷನ್ ಪ್ರೈವೇಟ್ ಲಿಮಿಟೆಡ್ನ ಪರೀಕ್ಷಕರು 2025ರ ಡಿಸೆಂಬರ್ 3ರಂದು ನಡೆಸಿದ ಪರೀಕ್ಷೆಯಲ್ಲಿ ಆಭರಣಗಳು ನಕಲಿ ಎಂಬುದು ದೃಢಪಟ್ಟಿದೆ. ನಕಲಿ ಬಂಗಾರದ ಒಡವೆಗಳನ್ನು ಅಸಲಿ ಎಂದು ನಂಬಿಸಿ, ಸಾರ್ವಜನಿಕರ ಠೇವಣಿಯಿಂದ ಕಾರ್ಯನಿರ್ವಹಿಸುವ ಬ್ಯಾಂಕ್ನಿಂದ ಸಾಲ ಪಡೆದು ಆರೋಪಿ ವಂಚನೆ ಎಸಗಿರುವ ಆರೋಪಿ ವಿರುದ್ಧ ಬ್ಯಾಂಕ್ನ ಮೇಲಾಧಿಕಾರಿಗಳ ಅನುಮತಿ ಪಡೆದು ಮರುಮೌಲ್ಯಮಾಪನ ವರದಿಯೊಂದಿಗೆ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



