ಉಡುಪಿ : ಎಟಿಎಂನಲ್ಲಿ ಹಣ ಪಡೆಯಲು ಬಂದ ವ್ಯಕ್ತಿಯೊಬ್ಬರು ಅನಧಿಕೃತ ಕಾರ್ಡ್ ಬಳಕೆಯಿಂದ ವ್ಯವಹಾರ ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಎಟಿಎಂ ಪರದೆಗೆ ಹಾನಿ ಮಾಡಿರುವ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆದಲ್ಲಿ ನಡೆದಿದೆ.

ಹೂಡೆ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಕೆ. ರವಿಕುಮಾರ್ ನೀಡಿದ ದೂರಿನಂತೆ, ಆ.30ರಂದು ರಾತ್ರಿ 9.52ರ ಸುಮಾರಿಗೆ ಗ್ರಾಹಕರೊಬ್ಬರು ಶಾಖೆ ಆವರಣದಲ್ಲಿರುವ ಎಟಿಎಂಗೆ ಹಣ ಪಡೆಯಲು ಬಂದಿದ್ದರು. ಅನಧಿಕೃತ ಕಾರ್ಡ್ ಬಳಕೆಯಿಂದ ವ್ಯವಹಾರ ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಬೈಕ್ನ ಕೀಲಿಯಿಂದ ಎಟಿಎಂ ಪರದೆಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಬಳಿಕ ಎಟಿಎಂ ಆವರಣದಲ್ಲಿ ಇರಿಸಲಾಗಿದ್ದ ಅಗ್ನಿಶಾಮಕ ಸಾಧನವನ್ನು ತೆಗೆದುಕೊಂಡು ಎಟಿಎಂ ಪರದೆಗೆ ಎರಡು ಬಾರಿ ಹೊಡೆದ ಪರಿಣಾಮ ಪರದೆ ಒಡೆದು ಹಾನಿಗೊಳಗಾಗಿದೆ. ಇದರಿಂದ ಬ್ಯಾಂಕಿನ ಆಸ್ತಿಗೆ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎಟಿಎಂಗೆ ಹಾನಿ ಮಾಡಿರುವ ವ್ಯಕ್ತಿ ಇಸ್ಮಾಯಿಲ್ ಬಿಜಾಪುರಿ ಎಂದು ತಿಳಿದುಬಂದಿದ್ದು, ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ.


