ಉಡುಪಿ: ತುರ್ತು ಚಿಕಿತ್ಸೆಗಾಗಿ ಹಣದ ಅಗತ್ಯವಿದ್ದ ಮಹಿಳೆಯೊಬ್ಬರಿಗೆ ಚಿನ್ನವನ್ನು ಫೈನಾನ್ಸ್ನಲ್ಲಿ ಅಡವಿಟ್ಟು ಹಣ ಕೊಡಿಸುವುದಾಗಿ ನಂಬಿಸಿ, ಚಿನ್ನ ಪಡೆದು ಹಣವನ್ನೂ ನೀಡದೆ ವಂಚಿಸಿರುವ ಪ್ರಕರಣ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಹೆಬ್ರಿ ಗ್ರಾಮದ ಶೃತಿ (32) ಅವರ ತಾಯಿಗೆ ಆರೋಗ್ಯ ಸರಿಯಿಲ್ಲದ ಕಾರಣ 2025ರ ಫೆ.23ರಂದು ತುರ್ತು ಚಿಕಿತ್ಸೆಗೆ ಹಣದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಹೆಬ್ರಿಯ ಮುತ್ತೂಟ್ ಫೈನಾನ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಪರಿಚಯದ ಮಂಜುನಾಥ್ ಎಂಬಾತನನ್ನು ಸಂಪರ್ಕಿಸಿದ್ದರು.

ನಿಮ್ಮ ಬಳಿ ಚಿನ್ನವಿದ್ದರೆ ನೀಡಿ ಅದನ್ನು ಫೈನಾನ್ಸ್ನಲ್ಲಿ ಅಡವಿಟ್ಟು ಹಣ ಕೊಡಿಸುವುದಾಗಿ ಮಂಜುನಾಥ್ ನಂಬಿಸಿದ್ದಾನೆ ಎನ್ನಲಾಗಿದೆ. ಆತನ ಮಾತನ್ನು ನಂಬಿದ ಶೃತಿ ಅವರು 3 ಪವನ್ ತೂಕದ ಕನಕ ಮಾಲೆ ಸರ, 4 ಗ್ರಾಂ ತೂಕದ ಒಂದು ಜೊತೆ ಕಿವಿಯೋಲೆ, 1.5 ಗ್ರಾಂ ತೂಕದ ಲೇಡಿಸ್ ಉಂಗುರ ಹಾಗೂ 4 ಪವನ್ ತೂಕದ ಹವಳದ ಸರವನ್ನು ನೀಡಿದ್ದಾರೆ. ಬಳಿಕ ಮಂಜುನಾಥ್ ಶೃತಿ ಅವರ ಬ್ಯಾಂಕ್ ಖಾತೆಗೆ 70,000 ಜಮೆ ಮಾಡಿದ್ದು, ಉಳಿದ ಹಣವನ್ನು ಖಾತೆಗೆ ಹಾಕುವುದಾಗಿ ಭರವಸೆ ನೀಡಿದ್ದಾನೆ. ಅಲ್ಲದೆ, ಚಿನ್ನವನ್ನು ಬಿಡಿಸಿ ಕೊಡುವುದಾಗಿ ಹೇಳಿ ಶೃತಿ ಅವರಿಂದ ಗೂಗಲ್ ಪೇ ಮೂಲಕವೂ 70,000 ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆದರೆ ಇದುವರೆಗೂ ಹಣವನ್ನು ನೀಡದೆ, ಚಿನ್ನವನ್ನೂ ಬಿಡಿಸಿ ಕೊಡದೆ ನಂಬಿಕೆ ದ್ರೋಹ ಎಸಗಿ ವಂಚಿಸಿರುವುದಾಗಿ ಶೃತಿ ಅವರು ದೂರು ನೀಡಿದ್ದಾರೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


