ಉಡುಪಿ : ಈಗಾಗಲೇ ಬ್ಯಾಂಕ್ನಲ್ಲಿ ಗೃಹಸಾಲಕ್ಕೆ ಅಡಮಾನವಾಗಿದ್ದ ಮನೆಯನ್ನು ಆ ಮಾಹಿತಿಯನ್ನು ಮರೆಮಾಚಿ ಮತ್ತೊಬ್ಬರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಗಳ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಕುಂದಾಪುರ ಕಸಬಾ ಗ್ರಾಮದ ಚಿಕನ್ ಸಾಲ್ ರಸ್ತೆಯ ನಿವಾಸಿ ಶ್ರೀನಾಥ್ (50) ಅವರು ನೀಡಿದ ದೂರಿನ ಆಧಾರದಲ್ಲಿ ಉದಯ ಮೆಂಡನ್ ಹಾಗೂ ನಿರ್ಮಲಾ ಯು. ಮೆಂಡನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿತ ದಂಪತಿಗಳು ವಡೇರಹೋಬಳಿ ಗ್ರಾಮದ ಸರ್ವೆ ನಂ. 161/1F, 161/16 ಮತ್ತು 161/1H ವ್ಯಾಪ್ತಿಯ 4.5 ಸೆಂಟ್ಸ್ ಜಾಗದಲ್ಲಿದ್ದ ಮನೆಯನ್ನು 2021ರ ಆಗಸ್ಟ್ 12ರಂದು ಶ್ರೀನಾಥ್ ಅವರಿಗೆ ಮಾರಾಟ ಮಾಡಿದ್ದರು. ಈ ಸಂಬಂಧ ಕುಂದಾಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಸುಮಾರು 20.75 ಲಕ್ಷ ಮೌಲ್ಯದ ಕ್ರಯಪತ್ರವೂ ನೋಂದಣಿಯಾಗಿತ್ತು.

ಆದರೆ, ಬಳಿಕ ಈ ಆಸ್ತಿ ಈಗಾಗಲೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕುಂದಾಪುರ ಶಾಖೆಯಲ್ಲಿ ಗೃಹಸಾಲಕ್ಕಾಗಿ ಅಡಮಾನವಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಆರೋಪಿತರು ಬ್ಯಾಂಕ್ ಸಾಲವನ್ನು ಮರುಪಾವತಿಸದೇ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ, ಇತ್ತೀಚೆಗೆ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿಗಾಗಿ ಮನೆಗೆ ನೋಟಿಸ್ ಅಂಟಿಸಿದ್ದರು. ಈ ವೇಳೆ ತಾವು ಖರೀದಿಸಿದ ಮನೆ ಬ್ಯಾಂಕ್ ಋಣಭಾರದಲ್ಲಿದೆ ಎಂಬ ಸಂಗತಿ ಶ್ರೀನಾಥ್ ಅವರಿಗೆ ತಿಳಿದುಬಂದಿದೆ. ಆರೋಪಿತರು ಆಸ್ತಿಯ ನಿಜಸ್ಥಿತಿಯನ್ನು ಮರೆಮಾಚಿ ನಂಬಿಕೆ ದ್ರೋಹ ಹಾಗೂ ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.



