ಉಡುಪಿ : ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಉಚಿತ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಚೇರ್ಕಾಡಿಯಲ್ಲಿ ಉಚಿತ ನೇತ್ರ, ದಂತ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಗೆಳೆಯರ ಬಳಗ ಕನ್ನಾರು, ನ್ಯಾಷನಲ್ ಮೆಡಿಕೋಸ್ ಆರ್ಗನೈಜೇಷನ್, ಸಮುದಾಯ ವೈದ್ಯಕೀಯ ವಿಭಾಗ, ದಂತ ವಿಶ್ವವಿದ್ಯಾಲಯ ಕೆಎಂಸಿ ಮಣಿಪಾಲ, ಪ್ರಸಾದ್ ನೇತ್ರಾಲಯ, ಜಿಲ್ಲಾಸ್ಪತ್ರೆ ಉಡುಪಿ, ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ವಿಕಾಸ ಸಮಿತಿ ಚೇರ್ಕಾಡಿ ಇವರ ಸಹಯೋಗದಲ್ಲಿ ಚೇರ್ಕಾಡಿಯ ಆರ್.ಕೆ. ಪಾಟ್ಕರ್ ಶಾಲಾ ಆವರಣದಲ್ಲಿ ಶಿಬಿರ ಆಯೋಜಿಸಲಾಯಿತು.

ಶಿಬಿರವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ತಲುಪಿಸುವ ಇಂತಹ ಶಿಬಿರಗಳು ಸಮಾಜಮುಖಿ ಕಾರ್ಯಗಳಾಗಿದ್ದು, ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಹೊಂದಬೇಕು ಎಂದು ಹೇಳಿದರು. ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗದ ಸಂಯೋಜಕ ಜಿತೇಂದ್ರ ಮಂಜೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಾರು ಗೆಳೆಯರ ಬಳಗದ ಅಧ್ಯಕ್ಷ ಭಾಸ್ಕರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಶೇಖರ್ ಕುಲಾಲ್, ಸಮುದಾಯ ವೈದ್ಯಕೀಯ ವಿಭಾಗದ ಸೀನಿಯರ್ ರೆಸಿಡೆಂಟ್ ಡಾ. ರತ್ನ ಜೆಯ್, ದಂತ ವಿಶ್ವವಿದ್ಯಾಲಯದ ಡಾ. ಯತಿಕಾ ನಾಯಕ್, ಪ್ರಸಾದ್ ನೇತ್ರಾಲಯದ ಡಾ. ನಿರಂಜನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಉಮೇಶ್ ಎ. ನಾಯ್ಕ್, ಆರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗುರುರಾಜ್ ರಾವ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಪಾಟೀಲ್, ಚೇರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಕಿಟ್ಟಪ್ಪ ಅಮೀನ್, ಮಾಜಿ ಸದಸ್ಯೆ ಸುಜಾತ ದಿನೇಶ್ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದಲ್ಲಿ ಒಟ್ಟು 318 ಮಂದಿ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು. ಶಿಬಿರದಲ್ಲಿ ನೇತ್ರ ತಪಾಸಣೆ, ದಂತ ಪರೀಕ್ಷೆ, ಸಾಮಾನ್ಯ ಆರೋಗ್ಯ ತಪಾಸಣೆ ಜೊತೆಗೆ ಅಂಚೆ ಇಲಾಖೆಯ ವಿಮಾ ಯೋಜನೆಗಳ ಕುರಿತು ಮಾಹಿತಿ ಮತ್ತು ನೋಂದಣಿ ಪ್ರಕ್ರಿಯೆಯೂ ನಡೆಯಿತು. ವೈಷವಿ ಮತ್ತು ವೈಷ್ಣವಿ ಪ್ರಾರ್ಥನೆಗೈದರು. ಗಣೇಶ್ ಕುಲಾಲ್ ಸ್ವಾಗತಿಸಿದರು. ಶ್ರೀಕಂಠ ವರದಿ ವಾಚಿಸಿದರು. ಉಮೇಶ್ ಪೂಜಾರಿ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿದರು.



