ಉಡುಪಿ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಯೋಜನೆಯಡಿ 91ನೇ ಮನೆಯನ್ನು ವಿದ್ಯಾರ್ಥಿ ನಿಖಿಲ್ ಎಸ್. ಅವರಿಗೆ ಹಸ್ತಾಂತರಿಸಲಾಯಿತು. ಕುಂದಾಪುರ ತಾಲೂಕಿನ ಜಪ್ತಿಯ ಪಾಂಡೇಶ್ವರದಲ್ಲಿ 7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ‘ಮಂಜುನಾಥ ನಿಲಯ’ವನ್ನು ಸರಸ್ವತಿ ಹೊಳ್ಳರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಶ್ರೀಮತಿ ಕುಸುಮಾ ಹಾಗೂ ದಿ. ಶಿವರಾಮ ಅವರ ಪುತ್ರನಾದ ನಿಖಿಲ್ ಎಸ್. ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 97.6 ಶೇಕಡಾ ಅಂಕಗಳೊಂದಿಗೆ ಸಾಧನೆ ಮಾಡಿದ್ದು, ಪ್ರಸ್ತುತ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಾಂಡೇಶ್ವರ ಮಂಜುನಾಥ ಹೊಳ್ಳ ಅವರ ಸ್ಮರಣಾರ್ಥ ಹಾಗೂ ಸರಸ್ವತಿ ಹೊಳ್ಳರ ಗೌರವಾರ್ಥವಾಗಿ ಅವರ ಪುತ್ರಿಯರ ಪ್ರಾಯೋಜಕತ್ವದಲ್ಲಿ ಈ ಮನೆ ನಿರ್ಮಾಣಗೊಂಡಿದೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಯಕ್ಷಗಾನ ಕಲಾರಂಗ ಸಂಸ್ಥೆ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ, ಮನೆಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿ ನೆರವು ನೀಡುವುದು ಶ್ಲಾಘನೀಯ ಕಾರ್ಯ ಎಂದರು. ವಿದ್ಯಾರ್ಥಿಗಳ ಅಗತ್ಯಗಳಿಗೆ ತಕ್ಷಣ ಸ್ಪಂದಿಸುವ ಸಂಸ್ಥೆಯಾಗಿ ಕಲಾರಂಗ ಹೆಸರುವಾಸಿಯಾಗಿದೆ ಎಂದು ಪ್ರಶಂಸಿಸಿದರು.

ವೇದಿಕೆಯಲ್ಲಿ ಶಿವಮೊಗ್ಗದ ಮಾಜಿ ರೋಟರಿ ಗವರ್ನರ್ ಡಾ. ಪಿ. ನಾರಾಯಣ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಡಾ. ಗೀತಾ ಸಾಮಕ್, ಉಷಾ ಎನ್. ಹೆಬ್ಬಾರ್, ಡಾ. ಗಣೇಶ್ ಮಧ್ಯಸ್ಥ, ಕಿಶೋರ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಧ್ಯಾ ಶರ್ಮಾ, ರೇಖಾ ಮಕ್ಕಿತ್ತಾಯ, ಡಾ. ತಾರಾ ಕಾರಂತ್, ಡಾ. ಎಸ್.ಜಿ. ಸಾಮಕ್, ನಾಗರಾಜ ಹೆಬ್ಬಾರ್, ಅರವಿಂದ ಶರ್ಮಾ, ಡಾ. ಕೃಷ್ಣಮೂರ್ತಿ ಮಕ್ಕಿತ್ತಾಯ, ಡಾ. ಕೃಷ್ಣ ಕಿರಣ್ ಕಾರಂತ್, ಯಶೋದಾ ಹೊಳ್ಳ ಸೇರಿದಂತೆ ಹಲವರು ಭಾಗವಹಿಸಿದರು.

ಸಂಸ್ಥೆಯ ಸದಸ್ಯರಾದ ಯು.ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯಾಯ, ಜಯರಾಮ ಪಡಿಯಾರ್, ರಾಮಚಂದ್ರ ಅಡಿಗ, ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಬಿದ್ಕಲ್ ಕಟ್ಟೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಫಲಾನುಭವಿ ವಿದ್ಯಾರ್ಥಿಗಳ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮವನ್ನು ನಿರೂಪಿಸಿದರು.



