ಉಡುಪಿ : ಜಯಕರ್ ಶೆಟ್ಟಿ ಇಂದ್ರಾಳಿ ಅವರ ವಿಶೇಷ ಆಸಕ್ತಿಯಿಂದ, ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ಥ್ರೆಡ್ ಆರ್ಟ್ ಕಲಾಕೃತಿಯನ್ನು ಇಂದು ಭಕ್ತಿಪೂರ್ವಕವಾಗಿ ಸಮರ್ಪಿಸಲಾಯಿತು.

ಈ ಕಲಾಕೃತಿಯನ್ನು ಪ್ರತಿಭಾವಂತ ಕಲಾವಿದ ಪ್ರಶಾಂತ್ ಶ್ರೀಯಾನ್ ಮದಗ ಅವರು ತಮ್ಮ ಅಪಾರ ಕೌಶಲ್ಯದಿಂದ ಸುಮಾರು 4,500ಕ್ಕೂ ಅಧಿಕ ಸುತ್ತುಗಳ ದಾರಗಳನ್ನು ನಿಖರವಾಗಿ ಹೆಣೆದು, ಸ್ವಾಮೀಜಿಯವರ ಸುಂದರ ಹಾಗೂ ಭಾವಪೂರ್ಣ ಚಿತ್ರಣವನ್ನು ಮನಮೋಹಕವಾಗಿ ಮೂಡಿಸಿದ್ದಾರೆ.

ಥ್ರೆಡ್ ಆರ್ಟ್ ಎಂಬುದು ದಾರಗಳನ್ನು ಬಳಸಿಕೊಂಡು ಭಾವಚಿತ್ರವನ್ನು ರೂಪಿಸುವ ವಿಶಿಷ್ಟ ಹಾಗೂ ಅಪೂರ್ವ ಕಲಾ ಪ್ರಕಾರವಾಗಿದೆ. ಇದು ಕುಂಚದ ಮೂಲಕ ಚಿತ್ರ ಬಿಡಿಸುವ ಸಾಂಪ್ರದಾಯಿಕ ವಿಧಾನವಲ್ಲ; ಬದಲಾಗಿ ಅನೇಕ ದಾರಗಳನ್ನು ನಿಖರವಾಗಿ ಹೆಣೆದು, ಸೂಕ್ಷ್ಮತೆಯಿಂದ ಭಾವಚಿತ್ರವನ್ನು ಸೃಷ್ಟಿಸುವ ಅಪರೂಪದ ಕಲೆ.

ತ್ಯಾಗ, ತಪಸ್ಸು ಮತ್ತು ತತ್ವಜ್ಞಾನದ ಸಂಕೇತವಾಗಿರುವ ಪವಿತ್ರ ಕಾವಿ ವಸ್ತ್ರಧಾರಿ ಧಾರ್ಮಿಕ ಯೋಗಿಯ ದಿವ್ಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತೆ ಕಾವಿ ವರ್ಣದಲ್ಲಿ ಈ ಭಾವಚಿತ್ರವನ್ನು ರೂಪಿಸಲಾಗಿದ್ದು, ಅದನ್ನು ಅತೀವ ಭಕ್ತಿಭಾವದೊಂದಿಗೆ ಸ್ವಾಮೀಜಿಯವರ ದಿವ್ಯ ಅನುಗ್ರಹಕ್ಕೆ ಪ್ರತೀಕವಾಗಿ ಸಮರ್ಪಿಸಲಾಯಿತು.



