ಉಡುಪಿ : ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ವಾಸ್ತವ್ಯವಿದ್ದ ಐದು ಕುಡುಬಿ ಕುಟುಂಬಗಳ ಮನೆಗಳನ್ನು ತಾಲೂಕು ಆಡಳಿತ ಏಕಾಏಕಿ ತೆರವುಗೊಳಿಸಿರುವುದು ಖೇದಕರ ಎಂದು ಕುಂದಾಪುರ ಶಾಸಕ ಎ. ಕಿರಣ್ಕುಮಾರ್ ಕೊಡ್ಗಿ ಹೇಳಿದ್ದಾರೆ.

ಅವರು ಬ್ರಹ್ಮಾವರ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶಾಸಕಾಂಗ–ಕಾರ್ಯಾಂಗ ಸಮನ್ವಯ ಇಲ್ಲದೆ ತಹಶೀಲ್ದಾರ್ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ತಕ್ಷಣ ಜಾಗ ಮತ್ತು ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ತಾಲೂಕು ಕಚೇರಿಯ ಉದ್ದೇಶ ಜನರಿಗೆ ಹಕ್ಕುಪತ್ರ ನೀಡುವುದೇ ಹೊರತು ಮನೆ ಒಡೆಯುವುದಲ್ಲ. ಜಿಲ್ಲೆಯಲ್ಲಿ ಸಾವಿರಾರು ಮಂದಿ ಇನ್ನೂ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.

ಕುಡುಬಿ ಸಮಾಜದ ಜಿಲ್ಲಾಧ್ಯಕ್ಷ ಪ್ರಭಾಕರ ನಾಯ್ಕ್, ಬಡ ಕುಟುಂಬಗಳ ಮೇಲೆ ನಡೆದ ಆಡಳಿತದ ದಬ್ಬಾಳಿಕೆಯನ್ನು ಖಂಡಿಸಿ, ನ್ಯಾಯ ಸಿಗದಿದ್ದರೆ ಪಕ್ಷಾತೀತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸಂಜೆ ವೇಳೆಗೆ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.



