ಉಡುಪಿ: ಅಲೆವೂರು ಗ್ರಾಮದ ಕಲ್ಯಾಣ ನಗರದಲ್ಲಿ ನಡೆದ ಊರಿನ ನೇಮೋತ್ಸವದಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗಿ ಆಗಿದ್ದಾರೆ. ಅಲೆವೂರು ದೊಡ್ಡಮನೆ ಮನೆತನದವರು ಪೂಜಿಸುವ ತನಿಮಾನಿಗ ಹಾಗೂ ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ರಕ್ಷಿತ್ ಶೆಟ್ಟಿ ಕುಟುಂಬ ಸಮೇತರಾಗಿ ಉಪಸ್ಥಿತರಿದ್ದರು.

ಮುಂಜಾನೆ ವೇಳೆಗೆ ನೇಮೋತ್ಸವದ ಪ್ರಸಾದ ಸ್ವೀಕರಿಸಿದ ಅವರು, ದೈವದ ಮುಂದೆ ಅಭಯ ಕೋರಿ ಪ್ರಾರ್ಥಿಸಿದರು. ಈ ವೇಳೆ ಚಿಂತಿಸಬೇಡ, ನಾನು ನಿನ್ನ ಹಿಂದೆ ಇದ್ದೇನೆ ಎಂಬ ಅಭಯವಾಣಿಯನ್ನು ದೈವ ನೀಡಿದೆ.

ಅಲೆವೂರು ದೊಡ್ಡಮನೆ ಕುಟುಂಬದ ಕುಡಿಯಾದ ರಕ್ಷಿತ್ ಶೆಟ್ಟಿ ಬಹಳ ಹೊತ್ತು ನೇಮೋತ್ಸವದಲ್ಲಿ ಕುಳಿತು ದೈವ ಸೇವೆಯಲ್ಲಿ ಪಾಲ್ಗೊಂಡು ನಂತರ ವಾಪಸಾದರು. ಸದ್ಯ ಮುಂಬರುವ ಸಿನಿಮಾಗಳ ಬರವಣಿಗೆಯಲ್ಲಿ ಬ್ಯುಸಿಯಾಗಿರುವ ಅವರು, ತಂದೆ–ತಾಯಿ ಹಾಗೂ ಕುಟುಂಬದವರೊಂದಿಗೆ ರಾತ್ರಿ ನಡೆದ ನೇಮೋತ್ಸವದಲ್ಲೂ ಉಪಸ್ಥಿತರಾಗಿ ಭಕ್ತಿಯಲ್ಲಿ ಮೈಮರೆತರು.



