ಉಡುಪಿ: ಬಡಗು ತಿಟ್ಟಿನ ಪ್ರಸಿದ್ಧ ಮದ್ದಳೆವಾದಕ ಕರ್ಕಿ ಪ್ರಭಾಕರ ಪಾಂಡುರಂಗ ಭಂಡಾರಿ (83) ಅವರು ಶನಿವಾರದಂದು ಹೃದಯಾಘಾತದಿಂದ ನಿಧನರಾದರು. ತಂದೆ ಪಾಂಡುರಂಗ ಭಂಡಾರಿಯವರಿಂದ ಯಕ್ಷಗಾನ ಹಿಮ್ಮೇಳ ವಾದನ ಕಲಿತ ಅವರು, ಹದಿನಾಲ್ಕರ ವಯಸ್ಸಿನಲ್ಲೇ ಮೇಳ ಸೇರಿ ಗುಂಡಬಾಳ, ಕುಮಟಾ, ಅಮೃತೇಶ್ವರಿ, ಕೊಳಗಿಬೀಸ್, ಇಡಗುಂಜಿ ಹಾಗೂ ಸಾಲಿಗ್ರಾಮ ಮೇಳಗಳಲ್ಲಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾಸೇವೆ ಸಲ್ಲಿಸಿದ್ದರು.

ನೆಬ್ಬೂರರು ಮತ್ತು ಕಪ್ಪೆಕೆರೆಯವರ ಭಾಗವತಿಕೆಯಲ್ಲಿ ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆಯಂತಹ ಯಕ್ಷ ದಿಗ್ಗಜರನ್ನು ಕುಣಿಸಿದ ಖ್ಯಾತಿ ಇವರಿಗಿದೆ. ಸ್ಫುಟ ಪೆಟ್ಟು, ಸ್ಪಷ್ಟ ಬೆರಳುಗಾರಿಕೆ ಮತ್ತು ಹಾಡಿಗೆ ಪೂರಕವಾದ ವಾದನ ಶೈಲಿಯಿಂದ ಅಪಾರ ಮೆಚ್ಚುಗೆ ಪಡೆದಿದ್ದರು. ಸಾತ್ವಿಕ ಮತ್ತು ಶಿಸ್ತಿನ ನಡವಳಿಕೆಯಿಂದ ಸಹ ಕಲಾವಿದರು ಹಾಗೂ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.

ಅವರು ಪತ್ನಿ, ಪುತ್ರಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಮೂವರು ಪುತ್ರರೂ ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಪರಮೇಶ್ವರ ಭಂಡಾರಿ ಪ್ರಸಿದ್ಧ ಮದ್ದಳೆವಾದಕರಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದ ಅವರು, ಯಕ್ಷಗಾನ ಕಲಾರಂಗ ಪ್ರಶಸ್ತಿ ಹಾಗೂ ಕಳೆದ ವರ್ಷ ಸುವರ್ಣ ಪುರಸ್ಕಾರಕ್ಕೂ ಪಾತ್ರರಾಗಿದ್ದರು.



