ಉಡುಪಿ : ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಉಡುಪಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸಿದರು. ರೈತರು ಹಾಗೂ ಗ್ರಾಮೀಣ ಬಡ ಜನರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಎದುರಾಗುತ್ತಿದ್ದ ಅಡೆತಡೆಗಳ ನಿವಾರಣೆ, ಬಾಕಿ ಉಳಿದ ಹಕ್ಕುಪತ್ರಗಳು ಹಾಗೂ ಮಂಜೂರಾತಿ ಪತ್ರಗಳ ವಿತರಣೆಗೆ ಸಂಬಂಧಿಸಿದ ವಿಷಯಗಳು ಈ ವೇಳೆ ಚರ್ಚೆಗೆ ಬಂದವು.

ಶಾಸಕರು ಕಳೆದ ಸೆಪ್ಟೆಂಬರ್ನಲ್ಲಿ ಜನಪ್ರತಿನಿಧಿ ನಿಯೋಗದೊಂದಿಗೆ ಕುಂದಾಪುರ ತಾಲೂಕಿನ ಉಳ್ಳೂರು–74 ಗ್ರಾಮದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಬಾಧಿತರಾಗಿದ್ದ ಜನರ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಸರಕಾರಿ ಜಾಗದಲ್ಲಿ ವರ್ಷಗಳಿಂದ ಮನೆ ಕಟ್ಟಿ ವಾಸವಿದ್ದರೂ ಹಕ್ಕುಪತ್ರ ಸಿಗದೆ ಜನತೆ ಸಂಕಷ್ಟ ಅನುಭವಿಸುತ್ತಿದ್ದ ವಿಷಯದಲ್ಲಿ ತ್ವರಿತ ಕ್ರಮ ಕೈಗೊಂಡು ಅತ್ಯವಶ್ಯಕ ಅಡೆತಡೆಗಳನ್ನು ನಿವಾರಿಸಿ ಅಂತಿಮ ಆದೇಶ ಹೊರಡಿಸಿದ್ದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಶಾಸಕರು ಧನ್ಯವಾದ ಹೇಳಿದರು.

ಅದರ ಜೊತೆ, ಈ ಕಾರ್ಯಕ್ಕಾಗಿ ಶ್ರಮಿಸಿದ ಕುಂದಾಪುರ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರರು ಹಾಗೂ ಹಲವು ವರ್ಷಗಳಿಂದ ಹೋರಾಟ ನಡೆಸಿದ ಸ್ಥಳೀಯ ಜನಪ್ರತಿನಿಧಿಗಳಿಗೆ ಶಾಸಕರು ಕೃತಜ್ಞತೆ ಸಲ್ಲಿಸಿದರು. ಮುಂದುವರೆದು, ಉಳ್ಳೂರು–74 ಗ್ರಾಮದ ಸರ್ವೇ ನಂ. 153ರ 1800 ಏಕರೆ ಭೂಮಿಯಲ್ಲಿ, 150 ಏಕರೆ ಅರಣ್ಯ ಭೂಮಿಯನ್ನು ಹೊರತುಪಡಿಸಿ ಉಳಿದ ಕಂದಾಯ ಭೂಮಿಯಲ್ಲಿ ಹಲವು ವರ್ಷಗಳಿಂದ ಮನೆ ನಿರ್ಮಿಸಿ ವಾಸಿಸುತ್ತಿರುವವರಿಗೆ 94(ಸಿ) ಅಡಿ ಹಕ್ಕುಪತ್ರಗಳನ್ನು ನೀಡಿ, ಕೃಷಿ ಮಾಡುತ್ತಿರುವ ಅರ್ಹ ರೈತರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಭೂ ಮಂಜೂರಾತಿ ಮಾಡಲು ತ್ವರಿತ ಕ್ರಮ ಕೈಗೊಳ್ಳುವಂತೆ ಶಾಸಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಕ್ಷೇತ್ರದ ಇತರ ಭಾಗಗಳಲ್ಲಿ ಇರುವ ಡೀಮ್ಡ್ ಫಾರೆಸ್ಟ್ ಜಂಟಿ ಸರ್ವೇ ಕಾರ್ಯವನ್ನು ವೇಗಗೊಳಿಸುವುದು, ಜೊತೆಗೆ ಕೊಲ್ಲೂರು ಗ್ರಾಮದ 121 ಮತ್ತು 56ನೇ ಸರ್ವೇ ನಂಬರಿನ ಸಮಸ್ಯೆಗಳ ಪರಿಹಾರ, ಹಾಗು ಜಡ್ಕಲ್–ಮುದೂರು ಪ್ಲಾಟಿಂಗ್ ಸಮಸ್ಯೆಗೆ ತಕ್ಷಣದ ಪರಿಹಾರ ಒದಗಿಸುವಂತೆ ಶಾಸಕರು ಆಗ್ರಹಿಸಿದರು.



