ಉಡುಪಿ : ಕರಾವಳಿಯ ಪ್ರಸಿದ್ಧ ನಾಗಕ್ಷೇತ್ರವಾದ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ (ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ನವೆಂಬರ್ 26, ಬುಧವಾರ ಚಂಪಾ ಷಷ್ಠಿ (ಹಿರಿಷಷ್ಠಿ) ಮಹೋತ್ಸವ ಭಕ್ತಿಭಾವದಿಂದ ನೆರವೇರಿತು. ಉತ್ಸವದ ಅಂಗವಾಗಿ ನವೆಂಬರ್ 25ರಂದು ಬೆಳಿಗ್ಗೆ 9 ಗಂಟೆಗೆ ನವಕುಂಭ ಸ್ನಪನ, ಶ್ರೀ ಕಾಳಿಂಗ ದೇವರಿಗೆ ರುದ್ರಾಭಿಷೇಕ ಮತ್ತು ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಭಿಷೇಕ ನೆರವೇರಿತು. ನಂತರ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, 1 ಗಂಟೆಗೆ ಪ್ರಸಾದ ವಿತರಿಸಲಾಯಿತು.

ಷಷ್ಠಿ ದಿನದ ವಿಶೇಷ ಪೂಜೆಗಳು

ನ. 26 ಬುಧವಾರ ಬೆಳಿಗ್ಗೆ 4.30ಕ್ಕೆ ಅಭಿಷೇಕ, ಪಂಚಾಮೃತ ಪೂಜೆ, ಮಂಗಳಾರತಿ ಜರುಗಿದ ನಂತರ 5 ಗಂಟೆಯಿಂದ ಹಣ್ಣುಕಾಯಿ, ಹೂಕಾಯಿ, ಕಲಶ ಸಮರ್ಪಣೆ ಹಾಗೂ ಕರ್ಪೂರಾರತಿ ನಡೆಯಿತು. ನಂತರ ಭಕ್ತರಿಗೆ ತೀರ್ಥ–ಪ್ರಸಾದ ವಿತರಿಸಲಾಯಿತು. ಬೆಳಿಗ್ಗೆ 7 ರಿಂದ ಋತ್ವಿಜರಿಂದ ವೇದಪಾರಾಯಣ ನಡೆದಿದ್ದು, 10.30ಕ್ಕೆ ಉರುಳು ಸೇವೆ, ಮಧ್ಯಾಹ್ನ 12ಕ್ಕೆ ಕಲಶಾಭಿಷೇಕ ಮತ್ತು ಮಹಾಮಂಗಳಾರತಿ ಜರುಗಿತು. ಬಳಿಕ ದರ್ಶನ, ಕ್ಷೇತ್ರ ಪ್ರದಕ್ಷಿಣೆ, ಪಲ್ಲಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಆಯೋಜಿಸಲಾಯಿತು.

ಸಂಜೆಯ ಭಜನಾ ಕಾರ್ಯಕ್ರಮ

ಸಂಜೆ 6.30ರಿಂದ ರಾತ್ರಿ 8.30ರವರೆಗೆ ದೇವಸ್ಥಾನದ ಮಹಿಳಾ ಹಾಗೂ ಮಕ್ಕಳ ಭಜನಾ ತಂಡಗಳು ಭಕ್ತಿಗೀತೆಗಳನ್ನು ವೇದಿಕೆಗೆ ತಂದವು. ರಾತ್ರಿ 8.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ ನೆರವೇರಿತು.ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ಅಜಿತ್ ಕುಮಾರ್ ಶೆಟ್ಟಿ (ಅಸೋಡು), ಸದಸ್ಯರು ಸತ್ಯನಾರಾಯಣ ಪುರಾಣಿಕ (ಅರ್ಚಕರು), ಕೆ. ರಂಜನ್ ಕುಮಾರ ಶೆಟ್ಟಿ ಸಳ್ವಾಡಿ, ಸುಧೀರ್ ಜಿ. ಕಾಳಾವರ, ಎ. ಚಂದ್ರಶೇಖರ ಶೆಟ್ಟಿಗಾರ, ಅಕ್ಷತಾ ಎನ್. ಶೆಟ್ಟಿ, ಕೆ. ರತ್ನಾಕರ ಶೆಟ್ಟಿ, ರಾಜೀವಿ ಕಾಳಾವರ, ಸುಧಾಕರ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



