ಉಡುಪಿ : ಉಡುಪಿಯ ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠದಲ್ಲಿ ನಡೆಯಲಿರುವ ಐತಿಹಾಸಿಕ ಲಕ್ಷಕಂಠ ಗೀತಾ ಯಜ್ಞ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆ ಉಡುಪಿ ಗೀತಾ ಮಂದಿರದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು. ಪರ್ಯಾಯ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಗಳು ಸಭೆಯ ಅಧ್ಯಕ್ಷತೆ ವಹಿಸಿದ್ದು, ಉಡುಪಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಪರ್ಯಾಯ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿ, ನರೇಂದ್ರ ಮೋದಿ ಅವರು ನನ್ನ ಕಳೆದ ಪರ್ಯಾಯದಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿ ಆಗಮಿಸಿದ್ದರು. ಈ ಬಾರಿ ಪ್ರಧಾನಮಂತ್ರಿಯಾಗಿ ಆಗಮಿಸುತ್ತಿರುವುದು ಉಡುಪಿಗೆ ಗೌರವದ ಸಂಗತಿ. ಅವರ ಭೇಟಿಯು ಉಡುಪಿಯ ಸಂಸ್ಕೃತಿ, ಆತಿಥ್ಯ ಮತ್ತು ಧಾರ್ಮಿಕ ಪರಂಪರೆಯ ವಿಶಿಷ್ಟತೆಯನ್ನು ದೇಶದ ಮಟ್ಟಿಗೆ ಪರಿಚಯಿಸುತ್ತದೆ. ಪ್ರಧಾನಮಂತ್ರಿಗಳ ಸುರಕ್ಷತೆಗೂ ಸಂಪೂರ್ಣ ಆದ್ಯತೆ ನೀಡುತ್ತಾ, ಗೀತೋತ್ಸವವನ್ನು ಆಭಿವೃದ್ಧಿಗೊಳಿಸಲು ಎಲ್ಲರಿಂದ ಸಹಕಾರ ಅಗತ್ಯ ಎಂದರು.

ಈ ವೇಳೆ ಶ್ರೀಗಳು ಮುಂದುವರೆದು, ಒಂದು ತಿಂಗಳ ಕಾಲ ನಡೆಯಲಿರುವ ಗೀತೋತ್ಸವದಲ್ಲಿ ಸಂತ ಸಂಗಮ, ಗೀತಾ ಮಹಾಯಾಗ, ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ಮೊದಲಾದ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಅಮೆರಿಕಾ ಹಾಗೂ ಇತರ ದೇಶಗಳ ಗಣ್ಯರು, ಹಲವಾರು ಕೇಂದ್ರ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು. ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಮಾತನಾಡಿ, ಪರ್ಯಾಯ ಶ್ರೀಗಳ ಕಾರ್ಯಕ್ರಮಗಳು ಯಾವಾಗಲೂ ವಿಶಿಷ್ಟವಾಗಿವೆ. ಈ ಬಾರಿ ಪ್ರಧಾನಮಂತ್ರಿಗಳ ಭೇಟಿ ಉಡುಪಿಯ ಸಮಗ್ರ ಅಭಿವೃದ್ಧಿಗೆ ಹೊಸ ಬಲ ನೀಡಲಿದೆ. ಎಲ್ಲ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಹಕರಿಸಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬೆಳಪು ದೇವಿ ಪ್ರಸಾದ್ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮೊದಲಾದವರು ಮಾತನಾಡಿ, ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಪ್ರಧಾನಮಂತ್ರಿಗಳ ಭೇಟಿಗೆ ಸಂಬಂಧಿಸಿದ ಭದ್ರತಾ ಸನ್ನಾಹಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ದಿವಾನ ನಾಗರಾಜ ಆಚಾರ್ಯ ನಿರ್ವಹಿಸಿದರು. ಸಾಗರೋತ್ತರ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ವಂದಿಸಿದರು. ಶ್ರೀಮಠದ ಪ್ರಮುಖರಾದ ಸಂತೋಷ ಶೆಟ್ಟಿ ತೆಂಕರಗುತ್ತು, ರತೀಶ್ ತಂತ್ರಿ, ಪ್ರಮೋದ್ ಸಾಗರ್, ಯೋಗೀಂದ್ರ ಭಟ್, ರವೀಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.


