ಉಡುಪಿ : ಚುನಾವಣಾ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್ಐಆರ್)ಯನ್ನು ಹನ್ನೆರಡು ರಾಜ್ಯಗಳಿಗೆ ವಿಸ್ತರಿಸುವ ಭಾರತದ ಚುನಾವಣಾ ಆಯೋಗದ ನಿರ್ಧಾರವನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ವಿರೋಧಿಸಿದೆ. ಬಿಹಾರದಲ್ಲಿ ತೋರಿಸಿರುವಂತೆ, ಈ ಪ್ರಕ್ರಿಯೆಯು ಸಮಾಜದ ದುರ್ಬಲ ವರ್ಗಗಳ ಬಹಳಷ್ಟು ಸಂಖ್ಯೆಯ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ. ಪೌರತ್ವವನ್ನು ನಿರ್ಧರಿಸುವಲ್ಲಿ ಆಯೋಗದ ಅಧಿಕಾರ ವ್ಯಾಪ್ತಿಯ ಪ್ರಶ್ನೆಯು ಇನ್ನೂ ಸುಪ್ರೀಂ ಕೋರ್ಟ್ ಮುಂದೆ ಇರುವಾಗಲೂ ಈ ಪ್ರಕ್ರಿಯೆಯನ್ನು ಮುಂದುವರಿಸುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಮತದಾರರ ನೋಂದಣಿಗೆ ಪೌರತ್ವವು ಅಗತ್ಯವಾದರೂ, ಅದರ ನಿರ್ಣಯವು ಆಯೋಗದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಂವಿಧಾನವು ಸ್ಪಷ್ಟವಾಗಿ ಹೇಳುತ್ತದೆ ಎಂದು ಪೊಲಿಟ್ಬ್ಯುರೊ ಹೇಳಿದೆ.

ಬಿಹಾರದಲ್ಲಿನ ಅನುಭವದಿಂದ ಕಲಿಯಲು ಚುನಾವಣಾ ಆಯೋಗ ನಿರಾಕರಿಸುತ್ತದೆ. ದಾಖಲಾತಿ ನಮೂನೆಗಳೊಂದಿಗೆ ಪುರಾವೆಯಾಗಿ ಅಗತ್ಯವಿರುವ ಹನ್ನೊಂದು ದಾಖಲೆಗಳನ್ನು ಆರಂಭದಲ್ಲಿ ಸಲ್ಲಿಸುವ ಅಗತ್ಯವಿಲ್ಲ ಎಂದು ಅದು ಒಪ್ಪಿಕೊಳ್ಳಬೇಕಾಗಿ ಬಂತು. ಸುಪ್ರೀಂ ಕೋರ್ಟ್ನ ಮಧ್ಯಪ್ರವೇಶದ ನಂತರವೇ ಸೇರಿಸಲಾದ ಆಧಾರ್ ಅನ್ನು ಸಹ ನಿವಾಸದ ಪುರಾವೆಯಾಗಿ ಮಾತ್ರ ಪರಿಗಣಿಸಲಾಗುತ್ತದೆ. ಬಡವರು ಮತ್ತು ದುರ್ಬಲರು ಸಾಮಾನ್ಯವಾಗಿ ಹೊಂದಿರದ ದಾಖಲೆಗಳನ್ನು ಒತ್ತಾಯಿಸುವುದು ಈ ಗುಂಪುಗಳ ಮತದಾನದ ಹಕ್ಕನ್ನು ಹೆಚ್ಚಿನ ಪ್ರಮಾಣದಲ್ಲಿ ವಂಚಿಸುತ್ತದೆ.
ಮತದಾರರ ನೋಂದಣಿಯ ಹೊರೆಯನ್ನು ಮತದಾರರ ಮೇಲೆಯೇ ವರ್ಗಾಯಿಸುವುದಕ್ಕೆ ತನ್ನ ವಿರೋಧವನ್ನು ಪುನರುಚ್ಚರಿಸುತ್ತವುದಾಗಿ ಹೇಳಿರುವ ಸಿಪಿಐ(ಎಂ), ಮತದಾರರ ನೋಂದಣಿ ಮಾಡಿಕೊಳ್ಳುವುದು ಚುನಾವಣಾ ಆಯೋಗದ್ದೇ ಜವಾಬ್ದಾರಿ. ಚುನಾವಣಾ ಆಯೋಗ ಇಲ್ಲಗಳೆದರೂ, ಬಿಹಾರದಲ್ಲಿ 2003 ರ ಪರಿಷ್ಕರಣೆಯ ಮಾರ್ಗಸೂಚಿಗಳನ್ನು ಹಂಚಿಕೊಳ್ಳಲು ಅದು ನಿರಾಕರಿಸಿದರೂ ಪ್ರಸ್ತುತ ಪ್ರಕ್ರಿಯೆಯು ಅದರ ಅಧಿಕೃತ ದಾವೆಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿದೆ ಎಂಬುದು ಸ್ಪಷ್ಟವಾಯಿತು ಎಂದು ಹೇಳಿದೆ. ಮತದಾರರ ಪಟ್ಟಿಗಳು ದೋಷಮುಕ್ತವಾಗಿರಬೇಕು ಮತ್ತು ಪರಿಷ್ಕರಣಾ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು, ಆದರೆ ಬಿಜೆಪಿಯ ವಿಭಜನಕಾರಿ ಹಿಂದುತ್ವ ಕಾರ್ಯಸೂಚಿಯನ್ನು ಸಾಧಿಸಲು ಪೌರತ್ವವನ್ನು ನಿರ್ಧರಿಸಲಿಕ್ಕೆ ಎಸ್ಐಆರ್ ಅನ್ನು ಒಂದು ಸಾಧನವಾಗಿ ಬಳಸಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ದೃಢವಾಗಿ ನಂಬುವುದಾಗಿ ಪೊಲಿಟ್ಬ್ಯುರೊ ಹೇಳಿದೆ ಎಂದು ಸಿಪಿಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


