ಕೋಟ: ರಾಜಕೀಯ ಕ್ಷೇತ್ರದಲ್ಲಿ ಕೇವಲ ಸೇವೆಗೆ ಜನ ಮನ್ನಣೆ ಕೊಡುತ್ತಿದ್ದ ಕಾಲವೊಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹಣದ ಹಿಂದೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಬೇಸರದ ಸಂಗತಿ ಎಂದು ಸಹಕಾರಿ ಧುರೀಣ, ತಾಲೂಕು ಪಂಚಾಯತ್ ಮಾಜಿ ಸದಸ್ಯ ತಿಮ್ಮ ಪೂಜಾರಿ ಹೇಳಿದರು.

ಅವರು ಮಂಗಳವಾರದಂದು ಕೋಟ ಸಿಎ ಬ್ಯಾಂಕ್ ನ ಬಿಸಿ ಹೊಳ್ಳ ಸಭಾಂಗಣದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇದರ ವಾರದ ಸಭೆಯಲ್ಲಿ ಉಡುಪಿ ತಾಲೂಕು ವ್ಯವಸಾಯ ಉತ್ಪನ್ನಗಳ ಸಹಕಾರ ಮಾರಾಟ ಸಂಘ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಆಯೋಜಿಸಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸನ್ಮಾನಕ್ಕೂ ಮೊದಲು ಕೋಟ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ರೋ. ಕೃಷ್ಣ ಕಾಂಚನ್, ಉದ್ಯಮಿ ರೋ ರಾಜೇಂದ್ರ ಸುವರ್ಣ, ಪತ್ರಕರ್ತ ಅಶ್ವಥ್ ಆಚಾರ್ಯ, ಆರೋಗ್ಯ ಇಲಾಖೆಯ ರೋ ದೇವಪ್ಪ ಪಟಗಾರ್ ಮತ್ತು ಸ್ವರ್ಣೋದ್ಯಮಿ ರೋ ಸೀತಾರಾಮ ಆಚಾರ್ಯ ಅವರು ಸನ್ಮಾನಿತರ ಕುರಿತು ಅನಿಸಿಕೆ ಹಂಚಿಕೊಂಡರು. ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ರೋ. ಯೋಗೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟ ರಘುಪಾಂಡೇಶ್ವರ, ಕೋಶಾಧಿಕಾರಿ ಚಂದ್ರ ಪೂಜಾರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶರಣಯ್ಯ ಹಿರೇಮಠ ಹಿಂದಿನ ಸಭೆಯ ವರದಿ ವಾಚಿಸಿದರು.



