ಉಡುಪಿ : ಮುಂಬರುವ ಶೀರೂರು ಮಠದ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿಯ ಸಭೆ ಬೈಂದೂರು ವಲಯದಲ್ಲಿ ಉಪ್ಪುಂದ ಮತ್ತು ಕಮಲಶಿಲೆಯಲ್ಲಿ ನಡೆಯಿತು. ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಠದ ಪರವಾಗಿ ಸ್ವಾಗತ ಸಮಿತಿಯ ಕಾರ್ಯದರ್ಶಿಗಳಾದ ಮೋಹನ್ ಭಟ್ ಪ್ರಸ್ತಾವನೆಗೈದು ಮುಂಬರುವ ಶ್ರೀ ಮಠದ ಪರ್ಯಾಯ ಮಹೋತ್ಸವ ಕಾರ್ಯಕ್ರಮದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿ ಪರ್ಯಾಯ ಯಶಸ್ವಿಗೊಳಿಸಲು ಸಹಕಾರ ಕೋರಿದರು.

ಸಂಚಾಲಕರಾದ ಸುಪ್ರಸಾದ್ ಶೆಟ್ಟಿ ರವರು ಕ್ರಷ್ಣ ಮಠದ ಪರಂಪರೆ ಹಾಗು ಪರ್ಯಾಯ ಮಹೋತ್ಸವದ ಮಹತ್ವದ ಬಗ್ಗೆ ವಿವರಿಸಿದರು. ಜೊತೆ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯಕ್ ಯಾವ ರೀತಿ ಸಂಘಟನಾತ್ಮಕವಾಗಿ ಉಡುಪಿ ಜಿಲ್ಲೆಯ ಎಲ್ಲ ಮನೆಗಳನ್ನು ಶೀರೂರು ಮಠದ ವತಿಯಿಂದ ತಲುಪಬಹುದು ಎಂದು ವಿಶ್ಲೇಶಿಸಿದರು.

ಶಾಸಕರು ಮಾತನಾಡಿ ಮಠದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಎಲ್ಲರೂ ಸಹಕಾರ ನೀಡಬೇಕೆಂದು ಕರೆನೀಡಿದರು. ಮುಂದಿನ ಸಂಘಟನಾತ್ಮಕ ಚಟುವಟಿಕೆಗೆ ಪಂಚಾಯತ್ ವಾರು ಜವಾಬ್ದಾರಿಗಳನ್ನು ನೀಡಲಾಯಿತು. ಕಾರ್ಯದರ್ಶಿಗಳಾದ ವಿಷ್ಣುಪ್ರಸಾದ್ ಪಾಡಿಗಾರ, ಮಹಿಳಾ ಸಂಚಾಲಕಿ ಸಂಧ್ಯಾ ರಮೇಶ್, ಸ್ಥಳೀಯ ಪ್ರಮುಖರಾದ ರಾಜು ಪೂಜಾರಿ, ಸಂದೇಶ್ ಭಟ್, ಬಾಲಚಂದ್ರ ಭಟ್, ಗೌರಿ ದೇವಾಡಿಗ ಮತ್ತಿತರ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
