ಉಡುಪಿ: ನಗರದಲ್ಲಿನ ಆರ್ಟಿಓ ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯಕ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದೆ. ಸಾರ್ವಜನಿಕರಿಂದ ಬಂದ ದೂರು ಹಿನ್ನೆಲೆಯಲ್ಲಿ ಈ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಉಡುಪಿ ನಗರದ ಕಿನ್ನಿಮುಲ್ಕಿ ಪ್ರದೇಶದಲ್ಲಿರುವ ಫ್ಲ್ಯಾಟ್ನಲ್ಲಿ ಲಕ್ಷ್ಮೀನಾರಾಯಣ ನಾಯಕ್ ವಾಸಿಸುತ್ತಿದ್ದು, ಇಂದು ಬೆಳಿಗ್ಗೆ ಲೋಕಾಯುಕ್ತ ತಂಡವು ಅಲ್ಲಿ ತಪಾಸಣೆ ನಡೆಸಿತು.

ನಾಯಕ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರಾಗಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಉಡುಪಿ ಮಾತ್ರವಲ್ಲದೆ ಕುಮುಟಾ ಹಾಗೂ ಪಡುಅಲೆವೂರು ಪ್ರದೇಶದಲ್ಲಿರುವ ಸಂಬಂಧಿಕರ ಮನೆಗಳಲ್ಲೂ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಆರ್ಟಿಓ ಬ್ರೋಕರ್ ರವಿ ಅವರ ಮನೆ ಮೇಲೂ ದಾಳಿ ನಡೆದಿದೆ. ಪಡುಅಲೆವೂರಿನ ನಿವಾಸಿಯಾದ ರವಿ ಅವರ ಮನೆಯಲ್ಲಿ ದಾಖಲೆಗಳು ಹಾಗೂ ನಗದು ವಶಪಡಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಆರ್ಟಿಓ ಕಚೇರಿಯಲ್ಲಿ ಅನಧಿಕೃತ ವ್ಯವಹಾರ ಮತ್ತು ಆರ್ಥಿಕ ಅಕ್ರಮದ ಕುರಿತು ಬಂದ ಸಾರ್ವಜನಿಕ ದೂರಿನ ಆಧಾರವಾಗಿ ಲೋಕಾಯುಕ್ತ ಈ ಧಾಳಿ ನಡೆಸಿದೆ ಎನ್ನಲಾಗಿದೆ..



