ಕುಂದಾಪುರ: ಕಡವೆ ಅಡ್ಡ ಬಂದ ಹಿನ್ನಲೆ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಕಮಲಶಿಲೆಯಲ್ಲಿ ನಡೆದಿದೆ. ಕಮಲಶಿಲೆ ಸಮೀಪದ ತಾರೆಕುಡ್ಲುನ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ನೆಲ್ಲಿಕಟ್ಟೆಯ ಶ್ರೇಯಸ್ ಮೊಗವೀರ (23) ಮೃತಪಟ್ಟಿದ್ದು, ಸಹಸವಾರ ವಿಘ್ನೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ನೇಹಿತರಿಬ್ಬರು ಶನಿವಾರ ಮಧ್ಯಾಹ್ನ ಕಮಲಶಿಲೆ ದೇವಳಕ್ಕೆ ಭೇಟಿ ನೀಡಿ ಮರಳಿ ನೆಲ್ಲಿಕಟ್ಟೆಗೆ ಬರುವಾಗ ತಾರೆಕುಡ್ಲು ಸಮೀಪ ದೊಡ್ಡ ಕಡವೆ ಯೊಂದು ಬೈಕ್ ಗೆ ಒಮ್ಮೆಲೇ ಅಡ್ಡ ಬಂದಿದೆ. ಏಕಾಏಕಿ ಕಡವೆ ರಸ್ತೆ ನುಗ್ಗಿದ ಹಿನ್ನಲೆ ಬೈಕ್ ನೇರವಾಗಿ ಕಡವೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿ, ಬೈಕ್ ಸವಾರ ಶ್ರೇಯಸ್ ಮೊಗವೀರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಸಹಸವಾರನನ್ನು ಸದ್ಯ ಆಸ್ಪತ್ರೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಶಂಕರನಾರಾಯಣ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


