ಉಡುಪಿ :ಮೂರು ವೈಭವದ ಪರ್ಯಾಯ ಮಹೋತ್ಸವ ಯಶಸ್ವಿಯಾಗಿ ಪೂರೈಸಿದ, ಶ್ರೀಶಿರೂರು ಮಠದ ಕೀರ್ತಿಶೇಷ ಪರಮಪೂಜ್ಯ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಏಳನೇ ವರ್ಷದ ಆರಾಧನೆಯು ಉಡುಪಿ ರಥಬೀದಿಯಲ್ಲಿರುವ ಶ್ರೀರಾಘವೇಂದ್ರಸ್ವಾಮಿಗಳವರ ಮಠದಲ್ಲಿ ವಿಧಿವತ್ತಾಗಿ ವೈಭವದಿಂದ ನೆರವೇರಿತು. ಪ್ರಾತಃಕಾಲ 6.30ಕ್ಕೆ ಶ್ರೀರಾಘವೇಂದ್ರಮಠದಲ್ಲಿ ಶ್ರೀರಾಯರ ವೃಂದಾವನದ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮ ಜರಗಿತು. ತದನಂತರ ಶ್ರೀಶಿರೂರುಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥರ ಮೃತ್ತಿಕಾ ವೃಂದಾವನಕ್ಕೆ ಪಿ.ಲಾತವ್ಯ ಆಚಾರ್ಯರು ಕಲಶಾಭಿಷೇಕ ಸಲ್ಲಿಸಿದರು.ವೇದಮೂರ್ತಿ ಶ್ರೀಕೆಮುಂಡೆಲ್ ಸುಬ್ರಮಣ್ಯ ಭಟ್ ಹಾಗೂ ವೇದಮೂರ್ತಿ ಶ್ರೀಗಣೇಶಣ್ಣನವರು ಧಾರ್ಮಿಕ ಪ್ರಕ್ರಿಯೆಗಳನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು.ಮಧ್ಯಾಹ್ನ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರಗಿತು.
ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಪೂರ್ವಾಶ್ರಮದ ಬಂಧುಗಳು ನೆರವೇರಿಸಿದ ಈ ಆರಾಧನಾ ಮಹೋತ್ಸವದಲ್ಲಿ ಉಡುಪಿ ಶ್ರೀರಾಘವೇಂದ್ರ ಮಠದ ಮುಖ್ಯಸ್ಥರಾದ ಶ್ರೀಜಯತೀರ್ಥ ಆಚಾರ್ಯ, ಶ್ರೀಅಪ್ಪಣ್ಣ ಆಚಾರ್ಯ, ಶ್ರೀವಾಸುದೇವಣ್ಣ ಪೂರ್ವಾಶ್ರಮದ ಕುಟುಂಬಿಕರಾದ ವೇದಮೂರ್ತಿ ಶ್ರೀಅನಂತ ತಂತ್ರಿ,ಶ್ರೀಲಕ್ಷ್ಮೀನಾರಾಯಣ ತಂತ್ರಿ,ಶ್ರೀಪ್ರಹ್ಲಾದ ಆಚಾರ್ಯ ಸೊಂಡೂರು ಸೇರಿದಂತೆ ಇನ್ನೂ ಅನೇಕ ಗಣ್ಯರು ಅತಿಥಿಗಳು ಉಪಸ್ಥಿತರಿದ್ದರು. ಕೇಮಾರು ಸಾಂದೀಪನಿ ಮಠದ ಶ್ರೀಈಶವಿಠಲದಾಸ ಸ್ವಾಮೀಜಿಯವರು ಶ್ರೀಕೇಮಾರುಮಠದಲ್ಲಿ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನಾ ಉತ್ಸವದ ನಿಮಿತ್ತ ವಿಶೇಷ ಪೂಜೆ ನೆರವೇರಿಸಿ ಶ್ರೀಪಾದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.


