ಉಡುಪಿ : ಇದು ಹ್ಯಾರಿ ಪಾಟರ್ ಚಿತ್ರದ ಕೊನೆಯ ದೃಶ್ಯವಲ್ಲ… ಇದು ಕೆಮ್ತೂರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ತೂಟೆದಾರ ಉತ್ಸವದ ಅಪರೂಪದ ದೃಶ್ಯ. ಕರಾವಳಿಯಲ್ಲಿ ಸದ್ಯ ಉತ್ಸವಗಳು ಜಾತ್ರೆಗಳ ಸರದಿ. ಹೀಗಾಗಿ ಜಿಲ್ಲೆಯ ಒಂದೊಂದು ಭಾಗದಲ್ಲೂ ಒಂದೊಂದು ಆಚರಣೆಗಳು ನಡೆಯುತ್ತಿದೆ ಎನ್ನಬಹುದು. ಇದು ಕೆಮ್ತೂರು ಉತ್ಸವದಲ್ಲಿ ನಡೆಯುವ ಬೆಂಕಿ ಆಟ, ರಾಜ್ಯದಲ್ಲಿಯೇ ಬಲು ವಿಶೇಷ

ಇಲ್ಲಿನ ಜಾತ್ರೆಯ ಕೊನೆಯ ಭಾಗದಲ್ಲಿ ತೂಟೆದಾರ ಸಂಪ್ರದಾಯ ನಡೆಯುತ್ತೆ. ತೆಂಗಿನ ಗರಿಯ ಪಂಜು ತಯಾರಿಸುತ್ತಾರೆ ಇದನ್ನು ತುಳು ಆಡುಭಾಷೆಯಲ್ಲಿ ತೂಟೆ ಎಂದು ಕರೆಯಲಾಗುತ್ತೆ. ದೇವರು ಕಟ್ಟೆಪೂಜೆ ಸವಾರಿಗೆ ಹೊರಟು ನದಿ ಬದಿಯ ಗದ್ದೆಯಲ್ಲಿ ಎರಡು ಗುಂಪುಗಳು ಉರಿಯುತ್ತಿರುವ ಪಂಜುಗಳನ್ನು ಪರಸ್ಪರ ಎಸೆಯುತ್ತಾರೆ. ಒಂದು ರೀತಿ ಯುದ್ಧದಂತೆ ಕಂಡು ಬಂದರೂ ಇದು ಧಾರ್ಮಿಕ ಆಚರಣೆಯಾಗಿದ್ದು, ಕತ್ತಲಲ್ಲಿ ನಡೆಯುವ ಈ ಬೆಂಕಿ ಕದನ ನೋಡಲು ಬಲು ಸೊಗಸು.

ಕೆಮ್ತೂರಿನ ತೂಟೆದಾರ ಕತ್ತಲಲ್ಲಿ ನಡೆಯುವ ಬಣ್ಣದ ಆಟದಂತೆ ಕಾಣುತ್ತೆ. ಕಾರಣ ಸುತ್ತಲೂ ಗಾಢ ಕತ್ತಲು. ಅದರ ಮಧ್ಯೆ ಕೇವಲ ಬೆಂಕಿಯ ಪುಂಜವೊಂದು ಆಕಡೆ ಈಕಡೆ ಹಾರಾಡುತ್ತಾ ಉಲ್ಕೆಯಂತೆ ಭಾಸವಾಗುತ್ತೆ. ಕಟೀಲು ದೇವಸ್ಥಾನದಲ್ಲಿನಡೆಯುವ ತೂಟೆದಾರವೂ ಬಹಳ ಪ್ರಸಿದ್ಧಿ. ಕರಾವಳಿಯ ದೇವಸ್ಥಾಗಳಲ್ಲಿ ವಾರ್ಷಿಕ ಜಾತ್ರೆ ಸಂದರ್ಭ ಆರೇಳು ದಿನ ನಿದ್ದೆ ಬಿಟ್ಟು ಉತ್ಸವದಲ್ಲಿ ದಣಿದ ಮಂದಿಗೆ ಈ ಪಂಜಿನಾಟ ಉಲ್ಲಾಸ ನೀಡುತ್ತೆ.