Friday, June 27, 2025

spot_img

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

ಉಡುಪಿ : ಮಹಿಳೆಯರು ಒಂದೇ ಕ್ಷೇತ್ರಕ್ಕೆ ಸೀಮಿತರಾಗಿರದೆ , ಆರ್ಥಿಕ, ರಾಜಕೀಯ, ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ. ನಮ್ಮಿಂದ ಯಾವುದೇ ಕೆಲಸ ಮಾಡಲು ಅಸಾಧ್ಯ ಎಂದು ಭಾವಿಸಿ, ಸುಮ್ಮನೆ ಕುಳಿತರೆ ಜೀವನದಲ್ಲಿ ಮುಂದೆ ಸಾಗಲು ಆಗುವುದಿಲ್ಲ. ನಮ್ಮ ಜೀವನ ಮಟ್ಟವನ್ನು ಸುಧಾರಿಸುವ ಕುರಿತು ಪ್ರಗತಿ ಚಿಂತನೆ ಮಾಡಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಪರ್ಯಾಯ ಪೀಠಾಧಿಕಾರಿಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ನಗರದ ರಾಜಾಂಗಣದ ಶ್ರೀ ಕೃಷ್ಣ ಮಠದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಜಿಲ್ಲಾ ಹಾಗೂ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.

ದೇಶವನ್ನು ಕಾಪಾಡುವ ಸೈನಿಕರು ತನ್ನ ಮಾತೃಭೂಮಿಯನ್ನು ರಕ್ಷಿಸಲು ಪಣ ತೊಡುವ ಹಾಗೆ, ಒಬ್ಬ ಮಹಿಳೆಯು ತನ್ನ ಕುಟುಂಬದಲ್ಲಿ ಎದುರಾಗುವ ಎಲ್ಲಾ ಸುಖ, ದುಃಖ, ಕಷ್ಟ ಕಾರ್ಪಣ್ಯಗಳು ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಕುಟುಂಬದಲ್ಲಿ ಸೈನಿಕಳಂತೆ ತನ್ನನ್ನು ತಾನು ರೂಪಿಸಿಕೊಂಡಿದ್ದಾಳೆ ಎಂದರು. ಒಬ್ಬ ಪುರುಷ ವ್ಯಕ್ತಿಯ ಜೀವನದಲ್ಲಿ ಮಹಿಳೆಯು ಪ್ರಮುಖ ಪಾತ್ರ ವಹಿಸುತ್ತಾಳೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಬಾಳಿಗೆ ಬೆಳಕಾಗುತ್ತಾಳೆ. ಸಮಾಜದ ಎಲ್ಲಾ ಕಟ್ಟುಪಾಡುಗಳನ್ನು ಎದುರಿಸುವ ಮೂಲಕ ತಾನು ಪುರುಷರಷ್ಟೇ ಸರಿ ಸಮಾನಳು ಎಂದು ತೋರಿಸಿಕೊಟ್ಟಿದ್ದಾಳೆ. ಇಂಥಹಾ ಹೆಣ್ಣನ್ನು ಗೌರವಿಸಿ, ಪೂಜ್ಯ ಭಾವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಆಗಿನ ಕಾಲದಲ್ಲಿ ಬರಿ ನಾಲ್ಕು ಗೋಡೆಗಳ ಒಳಗೆ ಅವಕಾಶ ವಂಚಿತರಾಗಿ ಇದ್ದವರು, ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಲಿಂಗ ತಾರತಮ್ಯ ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ವೇ ಸಾಮಾನ್ಯವಾಗಿದೆ. ಇದನ್ನು ಹೋಗಲಾಡಿಸುವುದರೊಂದಿಗೆ ಮಹಿಳೆಯರಿಗೆ ಗೌರವಾಯುತವಾದ ಸಮಾನ ಅವಕಾಶ ದೊರಕುವಂತಾಗಬೇಕು ಎಂದ ಅವರು ಮಹಿಳೆಯರು ಸರಕಾರದ ಎಲ್ಲಾ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಂಡು ಸಮಾಜದ ಮುನ್ನೆಲೆಗೆ ಬರಬೇಕು ಎಂದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡುವುದರೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಪೂರಕ ವಾತಾವರಣವನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು. ಪುರುಷರು ಹಾಗೂ ಮಹಿಳೆಯರು ಸಮಾಜದಲ್ಲಿ ಸಮಾನತೆಯ ನೆಲೆಯಲ್ಲಿ ಮುಂದೆ ಸಾಗಬೇಕು. ಮಹಿಳೆಯರ ಸಾಮರ್ಥ್ಯವನ್ನು ಕುಗ್ಗಿಸುವ ದಾರಿಯನ್ನು ಒಡೆದು ಮುಂದೆ ಸಾಗಬೇಕು. ಮಹಿಳೆಯರು ಯಶಸ್ಸು ಸಾಧಿಸಲು ಸಮಾಜದಲ್ಲಿ ಸುರಕ್ಷಿತ ಸ್ಥಳವನ್ನು ಸೃಷ್ಟಿಸಬೇಕು ಎಂದರು.
ಸಮಾಜ ಹಾಗೂ ಕುಟುಂಬದವರು ಮಹಿಳೆಯರ ಸಾಧನೆಯನ್ನು ಪ್ರಶ್ನಿಸುವ ಮನೋಭಾವದಿಂದ ಹೊರಗೆ ಬರಬೇಕು. ಅದನ್ನು ಮನಹ ಪೂರ್ವಕವಾಗಿ ಒಪ್ಪುವಂತಹ ಮನೋಸ್ಥಿತಿ ಬೆಳೆಸಿಕೊಳ್ಳಬೇಕು. ಮಹಿಳೆಯರು ಅವಕಾಶವನ್ನು ಉಪಯೋಗಿಸಿಕೊಂಡು ಸಮಾಜದಲ್ಲಿ ಆರ್ಥಿಕವಾಗಿ ಸ್ವವಲಂಭಿಗಳಾಗಿ ಬಾಳಬೇಕು ಎಂದರು.
ಡಾ. ಅಂಬೇಡ್ಕರ್ ಮಾತಿನಂತೇ ಮಹಿಳೆಯ ಪ್ರಗತಿ ಎಂದರೆ ಅದೇ ನಿಜವಾದ ಸಾಮಾಜಿಕ ಬದಲಾವಣೆಯಾಗಿದೆ. ಒಂದು ರಾಷ್ಟ್ರ, ರಾಜ್ಯ ನಿರ್ಮಾಣಕ್ಕೆ ಪುರುಷರಷ್ಟೇ ಮಹಿಳೆಯರ ಕೊಡುಗೆಯೂ ಅಪಾರವಾಗಿರುತ್ತದೆ. ಮಹಿಳೆಯೂ ಸಾಮಾಜಿಕ ಬದಲಾವಣೆಯ ವಾಸ್ತುಶಿಲ್ಪಿ ಆಗಬೇಕು. ಆಕೆಯಲ್ಲಿ ಶಕ್ತಿ, ಸಾಮರ್ಥ್ಯ ಸಾಧಿಸಿ ತೋರಿಸುವ ಚಲವು ಇದೆ. ಆ ನಿಟ್ಟಿನಲ್ಲಿ ಅವಕಾಶ ಗಳು ಅವರುಗಳಿಗೆ ಸಿಗಬೇಕು ಎಂದರು.


ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ನಿರ್ಮಲಾ ಕುಮಾರಿ ಮಹಿಳೆಯರಿಗೆ ಕಾನೂನು ಅರಿವು ಹಾಗೂ ಉದ್ಯಮಿ ದಿವ್ಯಾ ರಾಣಿ ಆಧುನಿಕ ಮಹಿಳೆ ಆತ್ಮ ವಿಶ್ವಾಸದಿಂದ ಪ್ರಗತಿಯತ್ತ ವಿಷಯದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ಉತ್ಪಾದಿಸಿದ ವಸ್ತುಗಳ ವಸ್ತು ಪ್ರದರ್ಶನವನ್ನು ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಮಹಿಳೆಯರಿಂದ ಮನೋರಂಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕಿ ನಿರ್ದೇಶಕಿ ಪೂರ್ಣಿಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣ ಅಧಿಕಾರಿ ಅನುರಾಧ ಹಾದಿಮನೆ, ಜಿಲ್ಲಾ ಹಾಗೂ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ. ಕೆ ಪ್ರಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ, ದೀಪ ಹಾಗೂ ಶಾರದಾ ನಿರೂಪಿಸಿ, ವಸಂತಿ ಕೊರಡ್ಕರ್ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles