ಉಡುಪಿ: ಹಿರಿಯ ನ್ಯಾಯವಾದಿ ದಿ. ಚೇರ್ಕಾಡಿ ವಿಜಯ್ ಹೆಗ್ಡೆಯವರ ಸ್ಮರಣಾರ್ಥವಾಗಿ ಅಡ್ವೊಕೇಟ್ಸ್ ವೆಲ್ಫೇರ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಅಸೋಸಿಯೇಷನ್ ಆಫ್ ಉಡುಪಿ ಅಡ್ವಕೇಟ್ಸ್ ವತಿಯಿಂದ ಮಾ.8 & 9 ರಂದು ಉಡುಪಿ ಎಮ್ಜಿಎಮ್ ಮೈದಾನದಲ್ಲಿ ಅಂತರ್ರಾಜ್ಯ ಮಟ್ಟದ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.

ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ನ ಅಧ್ಯಕ್ಷ ದೇವದಾಸ್.ವಿ.ಶೆಟ್ಟಿಗಾರ್ ಪಂದ್ಯಾಟದ ಮಾಹಿತಿಯನ್ನು ವಿವರಿಸಿ, ಕ್ರೀಡಾಕೂಟವನ್ನು ಕುಂದಾಪುರ ವಕೀಲರ ಸಂಘದ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದರು.
ಮಾ.8 ರಂದು ಬೆಳಗ್ಗೆ 9 ಗಂಟೆಗೆ ಕ್ರೀಡಾಕೂಟವನ್ನು ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಧೀಶ ನ್ಯಾ| ವಿಶ್ವನಾಥ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಪ ಲೋಕಾಯುಕ್ತ ನ್ಯಾ| ಬಿ.ವೀರಪ್ಪ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ದಿ.ವಿಜಯ್ ಹೆಗ್ಡೆಯವರ ಪತ್ನಿ ವಿಂದ್ಯಾ.ವಿ.ಹೆಗ್ಡೆ, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ, ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ, ಎಮ್ಜಿಎಮ್ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ್ ಉಪಸ್ಥಿತರಿರಲಿದ್ದಾರೆ ಎಂದವರು ತಿಳಿಸಿದರು.

ಮಾ.8 ರಂದು ಸಂಜೆ 6.30 ಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ವೈದ್ಯೆ ಡಾ.ಶ್ರುತಿ ಬಲ್ಲಾಳ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ನ್ಯಾಯವಾದಿ ಎಮ್.ಕೆ ವಿಜಯ್ ಕುಮಾರ್ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಅಸೋಸಿಯೇಷನ್ನ ಗೌರವಾಧ್ಯಕ್ಷ ಹೆಚ್.ರತ್ನಾಕರ್ ಶೆಟ್ಟಿ ವಹಿಸಲಿದ್ದಾರೆ. ದಿ.ವಿಜಯ್ ಹೆಗ್ಡೆಯವರ ಪತ್ನಿ ವಿಂದ್ಯಾ.ವಿ.ಹೆಗ್ಡೆ, ಹಿರಿಯ ನ್ಯಾಯವಾದಿಗಳಾದ ಗೀತಾ ಕೌಶಿಕ್, ವಾಣಿ.ವಿ.ರಾವ್, ಶ್ಯಾಮಲಾ ಭಂಡಾರಿ, ರೇಖಾ ಹೆಗ್ಡೆ ಉಪಸ್ಥಿತರಿರಲಿದ್ದಾರೆ ಎಂದರು.
ಮಾ.9 ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸೋಸಿಯೇಷನ್ನ ಗೌರವಾಧ್ಯಕ್ಷ ಹೆಚ್.ರತ್ನಾಕರ್ ಶೆಟ್ಟಿ ವಹಿಸಲಿದ್ದಾರೆ. ಮಂಗಳೂರಿನ ಹಿರಿಯ ನ್ಯಾಯವಾದಿ ವಿಕ್ರಮ್ ಹೆಗ್ಡೆ ಮುಖ್ಯ ಭಾಷಣ ಮಾಡಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಮುಖಂಡರಾದ ಪ್ರಸಾದ್ರಾಜ್ ಕಾಂಚನ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಉದ್ಯಮಿ ಡಾ.ಜಯರಾಮ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ದಿ.ಚೇರ್ಕಾಡಿ ವಿಜಯ್ ಹೆಗ್ಡೆಯವರ ಪುತ್ರ ವೀರೆನ್ ಹೆಗ್ಡೆ ಅವರನ್ನು ಗೌರವಿಸಲಾಗುವುದು ಎಂದು ನುಡಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ನ ಗೌರವಾಧ್ಯಕ್ಷ ರತ್ನಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಖಿಲ್.ಬಿ.ಹೆಗ್ಡೆ, ಖಜಾಂಚಿ ವೈ.ಟಿ.ರಾಘವೇಂದ್ರ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ, ಹಿರಿಯ ನ್ಯಾಯವಾದಿಗಳಾದ ಜಯಪ್ರಕಾಶ್ ಕೆದ್ಲಾಯ, ಗೀತಾ ಕೌಶಿಕ್, ವಾಣಿ.ವಿ.ರಾವ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ತಮಿಳುನಾಡು, ಕೇರಳ, ಮುಂಬಯಿ, ಬಾಂಬೆ, ಪುಣೆ ಸೇರಿದಂತೆ ವಿವಿಧ ರಾಜ್ಯಗಳ ತಂಡವು ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ. ಕ್ರಿಕೆಟ್ನಲ್ಲಿ ಭಾಗವಹಿಸುವ ತಂಡಗಳಿಗೆ ₹ 5 ಸಾವಿರ ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ ₹ 1 ಲಕ್ಷ, ದ್ವೀತಿಯ ₹ 60 ಸಾವಿರ ಮತ್ತು ಟ್ರೋಫಿಯನ್ನು ಒಳಗೊಂಡಿದೆ. ಮೊದಲ ಸುತ್ತಿನ ಪಂದ್ಯಾಟಗಳ ಸೋತ ತಂಡಗಳಿಗೆ ₹ 10 ಸಾವಿರ ಬಹುಮಾನ ನೀಡಲಾಗುವುದು. ಸೆಮಿಫೈನಲ್ಸ್ನಲ್ಲಿ ಸೋತ ತಂಡಗಳಿಗೆ ₹ 20 ಸಾವಿರ ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು. ವಾಲಿಬಾಲ್ನಲ್ಲಿ ₹ 3 ಸಾವಿರ ಪ್ರವೇಶ ಶುಲ್ಕವಿದೆ. ಪ್ರಥಮ ₹ 50 ಸಾವಿರ, ದ್ವೀತಿಯ ₹ 25 ಸಾವಿರ, ತೃತೀಯ ₹ 15 ಸಾವಿರ, ಚತುರ್ಥ ₹ 10 ಸಾವಿರ ಮತ್ತು ಟ್ರೋಫಿ ನೀಡಲಾಗುವುದು. ಮಹಿಳಾ ದಿನಾಚರಣೆಯ ಅಂಗವಾಗಿ ತ್ರೋಬಾಲ್ ತಂಡಗಳಿಗೆ ಉಚಿತ ಪ್ರವೇಶ ಇದೆ. ಪ್ರಥಮ ₹ 30 ಸಾವಿರ, ದ್ವೀತಿಯ ₹ 20 ಸಾವಿರ, ತೃತೀಯ ₹ 10 ಸಾವಿರ, ಚತುರ್ಥ ₹ 7 ಸಾವಿರ ಹಾಗು ಟ್ರೋಫಿ ನೀಡಿ ಗೌರವಿಸಲಾಗುವುದು.