ಉಡುಪಿ: ಮಲ್ಪೆ ಬಾಪು ತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದ ಧಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟ್ ಸುಟ್ಟು ಕರಕಲಾಗಿದೆ. ನಿನ್ನೆ ತಡರಾತ್ರಿ ಮಲ್ಪೆಯ ಜನಾರ್ದನ ಟಿ ಕಾಂಚನ್ ಎಂಬುವರಿಗೆ ಸೇರಿದ ರವಿಪ್ರಕಾಶ್ ಹೆಸರಿನ ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ದಕ್ಕೆಯಲ್ಲಿ ಲಂಗರು ಹಾಕಿದ್ದ ಸಣ್ಣ ಟ್ರಾಲ್ ಬೋಟ್ ಇದಾಗಿದ್ದು ಬೆಂಕಿಯನ್ನು ಗಮನಿಸಿದ ಸ್ಥಳೀಯ ಮೀನುಗಾರರು ಇತರರನ್ನ ಎಚ್ಚರಿಸಿ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸಕಾಲದಲ್ಲಿ ಮಾಹಿತಿ ನೀಡಿ ಉಳಿದವರನ್ನು ಎಚ್ಚರಿಸಿದ ಪರಿಣಾಮ ಪಕ್ಕದಲ್ಲಿಯೇ ಲಂಗರು ಹಾಕಿದ್ದ ಉಳಿದ ಬೋಟ್ಗಳು ಬೆಂಕಿಗೆ ತುತ್ತಾಗುವುದು ತಪ್ಪಿದೆ. ಸ್ಥಳೀಯರ ನೆರವಿನಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ

ಬೆಂಕಿಗಾಹುತಿಯಾದ ಬೋಟಿನಲ್ಲಿ ಬಲೆ, 200 ಲೀ. ಡಿಸೇಲ್, ಜಿಪಿಎಸ್, ಫಿಶ್ ಫೈಂಡರ್, ಲೈಫ್ ಜಾಕೆಟ್, ವಾಟರ್ ಟ್ಯಾಂಕರ್, ಬಾಕ್ಸ್ ಇದ್ದು ಎಲ್ಲವೂ ಸುಟ್ಟು ಕರಕಲಾಗಿದೆ. ಒಟ್ಟು 15 ಲಕ್ಷ ರೂಪಾಯಿಗಳು ಅಧಿಕ ನಷ್ಟ ಸಂಭವಿಸಿದ್ದು ಸಮುದ್ರದಲ್ಲಿ ಉಬ್ಬರ ಇರುವ ಹಿನ್ನೆಲೆಯಲ್ಲಿ ಉಳಿದ ಬೋಟ್ ಗಳು ಬೆಂಕಿಗಾಹುತಿಯಾಗುವುದು ತಪ್ಪಿದೆ. ಇಲ್ಲವಾದರೆ ಧಕ್ಕೆಯಲ್ಲಿ ನಿಂತಿದ್ದ ಸುಮಾರು 25 ರಿಂದ 30 ಬೋಟ್ ಗಳು ಸಂಪೂರ್ಣವಾಗಿ ಉರಿದು ಭಸ್ಮವಾಗುವ ಸಾಧ್ಯತೆ ಇತ್ತು.