ಉಡುಪಿ : ಕಳೆದ ಐದು ದಿನಗಳಿಂದ ಡಾಂಬರ್ ನಲ್ಲಿ ಹೂತಿದ್ದ ಶ್ವಾನವನ್ನು ರಕ್ಷಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಆದಿಉಡುಪಿ ಸಂತೆ ಮಾರ್ಕೆಟ್ ಬಳಿ ರಸ್ತೆ ಡಾಂಬರ್ ಗೋಡನ್ ನಲ್ಲಿ ಶೇಖರಿಸಲಾಗಿದ್ದ ಕೆಲವು ಡಾಂಬರ್ ಡಬ್ಬಗಳಿಂದ ಡಾಂಬರ್ ಸೋರಿ ಸ್ಥಳದಲ್ಲಿ ಪಸರಿಸಿತ್ತು. ಆಹಾರ ಅರಸುತ್ತಾ ಬಂದಿದ್ದ ಶ್ವಾನವೊಂದು ಡಾಂಬರ್ ಗಮನಿಸದೆ ಅದರಲ್ಲಿ ಸಿಲುಕಿದೆ.

ಶ್ವಾನವೊಂದು ಡಾಂಬರ್ ನಲ್ಲಿ ಬಿದ್ದು ಏಳಲಾರದೆ ಕಳೆದ ಐದು ದಿನಗಳಿಂದ ಒದ್ದಾಡುತಿದ್ದು ಮಾಹಿತಿ ಪಡೆದ ಸಮಾಜ ಸೇವಕ ವಿಶುಶೆಟ್ಟಿ ಸ್ಥಳಕ್ಕೆ, ಹರೀಶ್ ಉದ್ಯಾವರ ಜೊತೆಗೆ ಆಗಮಿಸಿ ಡಬ್ಬಿಗಳ ನಡುವೆ ಡಾಂಬರ್ ನಲ್ಲಿ ಸಿಲುಕಿದ್ದ ಶ್ವಾನವನ್ನು ಬಹಳ ಪ್ರಯಾಸದಿಂದ ರಕ್ಷಿಸಿದಾರೆ. ಡಬ್ಬಿಯನ್ನು ವಿಶುಶೆಟ್ಟಿ ವಾಹನಕ್ಕೆ ಕಟ್ಟಿ ಎಳೆದು ತದನಂತರ ತೆಂಗಿನ ಎಣ್ಣೆಯನ್ನು ಸುರಿದು ನಾಯಿಯನ್ನು ರಕ್ಷಿಸುವಲ್ಲಿ ಹರೀಶ್ ಉದ್ಯಾವರ ಯಶಸ್ವಿಯಾಗಿದ್ದಾರೆ.

ಡಾಂಬರಿನ ವ್ಯಾಪಾರಿಗಳು ಈ ರೀತಿಯ ಡಾಂಬರ್ ಸೋರದಂತೆ ಜಾಗ್ರತೆ ವಹಿಸಿ, ಹಾವು ಹಾಗೂ ಮೂಕಾಪ್ರಾಣಿಗಳ ತೊಂದರೆ ಆಗದಂತೆ ಸಹಕರಿಸಬೇಕೆಂದು ವಿಶುಶೆಟ್ಟಿ ಆಗ್ರಹಿಸಿದ್ದಾರೆ.