ಬೈಂದೂರು : ತಮಿಳು ಖ್ಯಾತ ನಟ ವಿಶಾಲ್ ದಕ್ಷಿಣ ಭಾರತ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಮಂಗಳೂರಿನ ಜಾರಂದಾಯ ದೈವದ ಕೋಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ವಿಶಾಲ್ ಇನ್ನು ಇಂದು ಮುಂಜಾನೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಳಕ್ಕೆ ಭೇಟಿ ನೀಡಿ ವಿಶೇಷ ದರ್ಶನ ಪಡೆದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದ ನಟ ವಿಶಾಲ್ ಮಂಗಳೂರಿನ ಜಾರಂದಾಯ ದೈವದ ಮೊರೆ ಹೋಗಿದ್ದರು. ಮದ ಗಜ ರಾಜ ಚಿತ್ರದ ಪ್ರೆಸ್ ಮೀಟ್ ಸಂದರ್ಭ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಗಾಬರಿ ಹುಟ್ಟಿಸುವಂತೆ ಬದಲಾಗಿದ್ದ ವಿಶಾಲ್ ಅವರನ್ನು ನೋಡಿ ಅಭಿಮಾನಿಗಳು ಸಾಕಷ್ಟು ಚಿಂತೆಗೆ ಒಳಗಾಗಿದ್ದರು. ಮದಗಜ ರಾಜ ಚಿತ್ರ ಹಿಟ್ ಆದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿಶಾಲ್, ವೈರಲ್ ಫೀವರ್ ಹಿನ್ನೆಲೆಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತೀವ್ರ ಅನಾರೋಗ್ಯದ ಸುದ್ದಿಯನ್ನು ತಳ್ಳಿ ಹಾಕಿದ್ದರು. ಆದರೆ ಕಾಂತಾರ ಚಿತ್ರದ ಪ್ರೇರಣೆಯ ಹಿನ್ನೆಲೆಯಲ್ಲಿ ಮಂಗಳೂರಿನ ಜಾರಂದಾಯ ದೈವಸ್ಥಾನಕ್ಕೆ ಭೇಟಿ ನೀಡಿದ ವಿಶಾಲ್ ಅನಾರೋಗ್ಯದ ಕುರಿತು ದೇವರಲ್ಲಿ ಪ್ರಾರ್ಥನೆ ಇಟ್ಟಿದ್ದಾರೆ. ಅಲ್ಲದೆ ಸಮಸ್ಯೆ ಪರಿಹಾರವಾದ ಬಳಿಕ ದೈವ ಕ್ಕೆ ವಿಶೇಷ ಸೇವೆ ನೀಡುವುದಾಗಿ ಕೂಡ ಪ್ರಾರ್ಥಿಸಿದ್ದಾರೆ.
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಶಕ್ತಿ ಕ್ಷೇತ್ರ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳಕ್ಕೆ ಸಿನಿಮಾ ನಟರು ರಾಜಕಾರಣಿಗಳು ಪ್ರಸಿದ್ಧ ವ್ಯಕ್ತಿಗಳು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿರುತ್ತಾರೆ. ತಮ್ಮ ಮನೋ ಕಾಮನೆಗಳ ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅನುಗ್ರಹಕ್ಕೆ ಪ್ರಾರ್ಥಿಸುವುದು ಇಲ್ಲಿ ಮಾಮೂಲಿ. ಇದೇ ಹಿನ್ನೆಲೆಯಲ್ಲಿ ತಮಿಳು ನಟ ವಿಶಾಲ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ಅನಾರೋಗ್ಯದ ಕುರಿತು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭ ದೇವಳದ ಆಡಳಿತ ಮಂಡಳಿಯವರು ತಮಿಳು ನಟ ವಿಶಾಲ್ ಅವರನ್ನು ಸನ್ಮಾನಿಸಿ ಗೌರವಿಸಿದರು.