ಉಡುಪಿ: ಛತ್ರಪತಿ ಶ್ರೀ ಶಿವಾಜಿ ಅಭಿಮಾನಿ ಬಳಗದ ಆಯೋಜನೆಯಲ್ಲಿ ಫೆ.13 ರಂದು ಬಸ್ರೂರು ಸ್ವಾತಂತ್ರ್ಯ ದಿನ ಮಹೋತ್ಸವವು ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಈ ಬಗ್ಗೆ ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಪಾಂಡುರಂಗ ರಾವ್ ಸಾವಂತ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದು, ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುಣೆಯ ಭಾರತೀಯ ಸಂತ ಸಭಾದ ಸಂಘಟನಾ ಪ್ರಧಾನ ಕಾರ್ಯದರ್ಶಿ ಡಾ.ಸಂದೀಪ್ರಾಜ್ ಮಹಾದೇವರಾವ್ ಮಹಿಂದ್, ಮೂಡ್ಲಕಟ್ಟೆ ಐಎಂಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸಿದ್ದಾರ್ಥ ಶೆಟ್ಟಿ ಭಾಗವಹಿಸಲಿದ್ದಾರೆ. ಕೊಡಗಿನ ರಾಷ್ಟ್ರೀಯವಾದಿ ನಾಟಕಕಾರ ಅಡ್ಡಂಡ ಸಿ. ಕಾರ್ಯಪ್ಪ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಪ್ರಯುಕ್ತ ಅಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 11.30ಕ್ಕೆ ದಾರ್ಮಿಕ ಸಭೆಯಲ್ಲಿ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಪ್ರವಚನ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಗಂಗೊಳ್ಳಿಯಿಂದ ಹಡಗಿನಲ್ಲಿ ಹೊರಟು, ಬಸ್ರೂರು ಮಂಡಿಕೇರಿ ಹೊಳೆಬಾಗಿಲಿನಿಂದ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಂತರ 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ.ಸಂದೀಪ್ರಾಜ್ ಮಹಾದೇವರಾವ್ ಮಹಿಂದ್, ಬಳಗದ ಕಾರ್ಯದರ್ಶಿ ರಾಜೇಶ್ ಜಿ. ಕೆಳಮನೆ, ಸಂಚಾಲಕರಾದ ಸುಧೀರ್ ಮೇರ್ಡಿ ಮತ್ತು ಸುರೇಶ್ ಕೃಷ್ಣ ನಾಯಕ್ ಉಪಸ್ಥಿತರಿದ್ದರು.