ಉಡುಪಿ : ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಮಧ್ವ ನವರಾತ್ರೋತ್ಸವದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಮುಖ್ಯಸ್ಥರನ್ನು ಸನ್ಮಾನಿಸಿದರು.

ಶ್ರೀ ಮಧ್ವಾಚಾರ್ಯರು ಸನ್ಯಾಸಾಶ್ರಮ ಸ್ವೀಕಾರದ ಪೂರ್ವದಲ್ಲಿ ಗುರುಗಳಾದ ಅಚ್ಯುತ ಪ್ರೇಕ್ಷಾಚಾರ್ಯರ ಜೊತೆಯಲ್ಲಿ ಹೋಗಿದ್ದ ಹಾಗೂ ಸನ್ಯಾಸಾಶ್ರಮ ಸ್ವೀಕಾರದ ನಂತರವೂ ಹೋಗಿದ್ದ ಕಾರ್ನೂರು ಮಠದ ಮುಖ್ಯಸ್ಥರಾದ ರಾಜಭುವನೇಶ ಕಲ್ಲೂರಾಯ. ಕಾರ್ನೂರು ಮಠ , ಮತ್ತು ವಾಕ್ಯಾರ್ಥದಲ್ಲಿ ವಿಜಯರೂಪದಲ್ಲಿ ಪಡೆದ ಮಂಜಿನಾಡಿ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನ ದ ಪ್ರಧಾನ ಅರ್ಚಕರಾದ ವಿದ್ವಾನ್ ಜಿ. ವೆಂಕಟೇಶ್ ಭಟ್ ಮತ್ತು ಮಧ್ವಾಚಾರ್ಯರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಮಾರ್ಗದಲ್ಲಿ ಮಧ್ಯಾಹ್ನದ ಪೂಜೆಯನ್ನು ನೆರವೇರಿಸುತ್ತಿದ್ದ ನಡ್ಯಂತಾಡಿ ಮಠದ ಅರ್ಚಕರಾದ ಗೋಪಾಲಕೃಷ್ಣ ಆಚಾರ್ಯ ,
ತತ್ವೋದ್ಯೋತ ಗ್ರಂಥವನ್ನು ರಚಿಸಿದ ಕ್ಷೇತ್ರವಾದ ವರ್ಕಾಡಿಯ ಶ್ರೀ ಮಹಾವಿಷ್ಣು ದೇವಸ್ಥಾನ ದ ಪ್ರಧಾನ ಅರ್ಚಕರಾದ ರಾಘವೇಂದ್ರ ಆಚಾರ್ಯ ಹಾಗೂ ಸರ್ವಮೂಲ ಗ್ರಂಥಗಳ (ತಾಮ್ರದ ಹಾಳೆಯಲ್ಲಿ ಬರೆಸಿದ) ಶುದ್ಧಪ್ರತಿಯನ್ನು ಭೂಸ್ಥಾಪನೆಗೊಳಿಸಿದ ಕ್ಷೇತ್ರವಾದ ಕಟ್ತಿಲ ಮಠ ದ ಪ್ರಧಾನ ಅರ್ಚಕರಾದ
ಕೃಷ್ಣಪ್ರಸಾದ್ ಭಟ್ ಇವರನ್ನು ಪರಮಪೂಜ್ಯ ಶ್ರೀಪಾದರು ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಪರಮಾನುಗ್ರಹ ರೂಪವಾದ ಪ್ರಸಾದವನ್ನು ನೀಡಿ ಸನ್ಮಾನಿಸಿದರು.

ಶ್ರೀ ಪುತ್ತಿಗೆ ಮಠದ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಹಾಗೂ ಹಿರಿಯ ವಿದ್ವಾಂಸರಾದ ಪ್ರೊ ವ್ಯಾಸನಕೆರೆ ಪ್ರಭಂಜನಾಚಾರ್ಯರು ದಿವಾನರಾದ ವಿದ್ವಾನ್ ಎಂ ಪ್ರಸನ್ನ ಆಚಾರ್ಯ , ಶ್ರೀ ಮಹಿತೋಷ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಡಾ. ಬಿ ಗೋಪಾಲಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.


