ಕೋಟ: ಇತ್ತೀಚೆಗೆ ನಡೆದ ದನದ ಕೆಚ್ಚಲು ಕತ್ತರಿಸಿದ ಪ್ರಕರಣದ ಮಾದರಿಯಲ್ಲೇ ಮತಾಂಧರು ದನದ ಬಾಲ ತುಂಡರಿಸಿದ್ದಾರೆ ಎಂದು ಸುದ್ದಿ ಹರಡಿದ ವ್ಯಕ್ತಿಯ ವಿರುದ್ದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಘಟನೆ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಗುಂಡ್ಮಿಯಲ್ಲಿ ನಡೆದಿದೆ. ಕೋಟದ ಗುಂಡ್ಮಿ ನಿವಾಸಿ ಅನಿಲ್ ಮಯ್ಯ ಪ್ರಕರಣದ ಆರೋಪಿ.ಗುಂಡ್ಮಿಯ ಭಗವತಿ ರಸ್ತೆಯಲ್ಲಿರುವ ಅನಿಲ್ ಮಯ್ಯ ಅವರ ಮನೆಯ ಕರುವಿನ ಬಾಲದ ತುದಿಯನ್ನು ಯಾರೋ ಕತ್ತರಿಸಿದ್ದಾರೆ. ಬೆಂಗಳೂರು ಮಾದರಿಯಲ್ಲಿ ದುಷ್ಕೃತ್ಯ ಮೆರೆದಿದ್ದಾರೆ ಎಂದು ಸ್ಥಳೀಯ ಪ್ರದೇಶದಲ್ಲಿ ಸುದ್ದಿ ಹರಡಿ, ಕೆಲ ಮಾಧ್ಯಮಗಳಲ್ಲೂ ಈ ಬಗ್ಗೆ ವರದಿ ಪ್ರಕಟವಾಗಿತ್ತು.
ಬುಧವಾರ ಬೆಳಗ್ಗೆ ಸುಮಾರು 60 ವರ್ಷ ಅಪರಿಚಿತ ವ್ಯಕ್ತಿಯೊಬ್ಬರು ಧನ ಸಹಾಯ ಕೇಳಿಕೊಂಡು ಮನೆಗೆ ಬಂದಿದ್ದು, ಮನೆಯವರು ಅವರಿಗೆ ಹಣ ಕೊಟ್ಟಿರಲಿಲ್ಲ. ಆದರೆ ಅದೇ ದಿನ ಸಂಜೆ ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ಮಲಗಿದ್ದ ಕರುವಿನ ಬಾಲ ತುಂಡಾಗಿ ಬಿದ್ದಿರುವುದು ಕಂಡು ಬಂದಿದೆ. ಸಂಜೆ ಅನಿಲ ಮಯ್ಯ ಮನೆಗೆ ಬಂದಾಗ ಈ ವಿಷಯವನ್ನು ಮನೆಯವರು ಅವರಿಗೆ ತಿಳಿಸಿದ್ದು, ಅವರು ಹಸುವಿನ ಕೆಚ್ಚಲು ಕುಯ್ದ ಪ್ರಕರಣದೊಂದಿಗೆ ಇದು ಆಗಿರಬಹುದು ಎಂದು ಊಹಿಸಿದ್ದರು. ಬೆಳಗ್ಗೆ ಮನೆಗೆ ಧನಸಹಾಯ ಕೇಳಿಬಂದ ವ್ಯಕ್ತಿಯೇ ಈ ಕೃತ್ಯ ಎಸಗಿರಬಹುದು ಎಂದು ಅವರು ಅಂದಾಜಿಸಿದ್ದಾರೆ. ಆದರೆ ಅಸಲಿಗೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನ ಕಾಲಿರಿಸಿದ ಕಾರಣ ಕರುವಿನ ಬಾಲ ತುಂಡಾಗಿ ಬಿದ್ದಿರುವುದಾಗಿ ತದನಂತರ ಗೊತ್ತಾಗಿದೆ. ಆದರೆ ತಕ್ಷಣಕ್ಕೆ ಅನಿಲ ಮಯ್ಯ ಅವರ ಕರುವಿನ ತುಂಡಾದ ಬಾಲದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ದುಷ್ಕರ್ಮಿಗಳ ಕೆಲಸ ಅಂದುಕೊಂಡಿದ್ದರು.
ಕೋಟ ಪೊಲೀಸರು ಹಾಗೂ ಉನ್ನತ ಅಧಿಕಾರಿಗಳು ಮಯ್ಯ ಅವರ ಮನೆಗೆ ಹೋಗಿ ವಿಚಾರಿಸಿದಾಗ ಅದು ಬಾಲ ಕತ್ತರಿಸಿದ್ದಲ್ಲ ಕರು ತುಳಿದು ಬಾಲ ತುಂಡಾಗಿದ್ದು ಅನ್ನುವುದು ಖಚಿತವಾಗಿದೆ. ಈ ತಪ್ಪು ತಿಳುವಳಿಕೆ ಮತ್ತು ಗಾಳಿಸುದ್ದಿಯಿಂದಾಗಿ ಸಾರ್ವಜನಿಕವಾಗಿ ತಪ್ಪು ಸಂದೇಶ ರವಾನೆಯಾಗಿದ್ದು, ಕೋಮು ವೈಮನಸ್ಸು ಸೃಷ್ಟಿಯಾಗಿ ಶಾಂತಿ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಈ ಬಗ್ಗೆ ಕಾನೂನು ಕ್ರಮ ಅಗತ್ಯ ಎನ್ನುವ ನಿಟ್ಟಿನಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವುದಾಗಿ ಕೋಟ ಠಾಣಾಧಿಕಾರಿ ರಾಘವೇಂದ್ರ ಅವರು ತಿಳಿಸಿದ್ದಾರೆ.