Monday, June 30, 2025

spot_img

ಗಂಡನನ್ನು ಕೊಂದು, ಜೇಬಿನಲ್ಲಿ 8 ವಯಾಗ್ರದ ಪ್ಯಾಕೆಟ್ ಇಟ್ಟ ಹೆಂಡತಿ…..!

ಕಾನ್ಪುರ:

   ಒಬ್ಬ ಮಹಿಳೆ ತನ್ನ ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನು ಕೊಲೆ ಮಾಡಿದ್ದಾಳೆ. ನಂತರ ಅವಳು ತನ್ನ ಗಂಡನ ದೇಹದ ಜೇಬಿನಲ್ಲಿ 8 ವಯಾಗ್ರ ಪ್ಯಾಕ್​ಗಳನ್ನು ಇಟ್ಟಿದ್ದಳು. ಈ ಮಾತ್ರೆಗಳ ಮಿತಿಮೀರಿದ ಸೇವನೆಯಿಂದ ತನ್ನ ಪತಿ ಸತ್ತಿದ್ದಾನೆ ಎಂದು ಆಕೆ ಬಿಂಬಿಸಿದ್ದಳು. ಆರಂಭದಲ್ಲಿ, ಪೊಲೀಸರು ಇದೇ ಸತ್ಯಕಥೆ ಎಂದು ನಂಬಿದ್ದರು. ಆ ಮಹಿಳೆ ಸತ್ಯವನ್ನೇ ಹೇಳುತ್ತಿರಬೇಕು ಎಂದು ಪೊಲೀಸರು ಭಾವಿಸಿದ್ದರು. ಆದರೆ, ಶವಪರೀಕ್ಷೆಯ ವರದಿ ಬಂದಾಗ ಸತ್ಯ ಹೊರಬಂದಿತು.

   ಪತ್ನಿ ತನ್ನ ಪ್ರಿಯಕರನ ಸಹಾಯದಿಂದ ತನ್ನ ಗಂಡನನ್ನು ಕೊಂದ ಈ ಘಟನೆ ಕಾನ್ಪುರದಲ್ಲಿ ನಡೆದಿದೆ. ಅಬಿದ್ ಅಲಿ ಎಂಬ ವ್ಯಕ್ತಿ ತನ್ನ ಪತ್ನಿ ಶಬಾನಾ ಮತ್ತು ಮಗನೊಂದಿಗೆ ಕಾನ್ಪುರದಲ್ಲಿ ವಾಸಿಸುತ್ತಿದ್ದರು. ಜನವರಿ 19ರಂದು, ಶಬಾನಾ ಪೊಲೀಸ್ ಠಾಣೆಗೆ ಹೋಗಿ ತನ್ನ ಪತಿ ವಯಾಗ್ರದ ಮಿತಿಮೀರಿದ ಸೇವನೆಯಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಳು. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಪರಿಶೀಲಿಸಿದಾಗ ಮೃತ ಅಬಿದ್‌ನ ಜೇಬಿನಲ್ಲಿ 8 ಪ್ಯಾಕೆಟ್ ವಯಾಗ್ರದ ಮಾತ್ರೆಗಳು ಕಂಡುಬಂದವು. ಅಲ್ಲದೆ, ಅಬಿದ್‌ನ ದೇಹದ ಮೇಲೆ ಹೊಡೆತ ಅಥವಾ ಇರಿತದ ಗಾಯಗಳಂತಹ ಯಾವುದೇ ಗುರುತುಗಳು ಕಂಡುಬಂದಿರಲಿಲ್ಲ. ಆದ್ದರಿಂದ, ಶಬಾನಾ ಅಂದರೆ ಅಬಿದ್‌ನ ಪತ್ನಿ ಸತ್ಯವನ್ನು ಹೇಳುತ್ತಿದ್ದಾಳೆ ಎಂದು ಪೊಲೀಸರು ಭಾವಿಸಿದ್ದರು. 

    ತನ್ನ ಗಂಡನ ಮರಣದ ನಂತರ ಶಬಾನಾ ತುಂಬಾ ಅಳುತ್ತಿರುವುದನ್ನು ಪೊಲೀಸರು ನೋಡಿದ್ದರು. ಆದ್ದರಿಂದ, ಪೊಲೀಸರು ಸಹ ಆಕೆ ಗಂಡನ ನಿಧನದಿಂದ ತುಂಬ ದುಃಖಿತಳಾಗಿದ್ದಾಳೆಂದು ಭಾವಿಸಿದ್ದರು. ಅದರ ನಂತರ ಪೊಲೀಸರು ಶವವನ್ನು ಶವಪರೀಕ್ಷೆಗೆ ಕಳುಹಿಸಿದ್ದರು. ಶವಪರೀಕ್ಷೆಯ ನಂತರ ಅಬಿದ್‌ನ ಶವವನ್ನು ಕುಟುಂಬಕ್ಕೆ ನೀಡಲಾಯಿತು. ಅವರ ಅಂತ್ಯಕ್ರಿಯೆಗಳನ್ನು ಸಹ ಮಾಡಲಾಯಿತು. ಆದರೆ, ಶವಪರೀಕ್ಷೆಯ ವರದಿಗಳು ಬಂದಾಗ, ಅಬಿದ್‌ನ ಸಾವಿಗೆ ಕಾರಣ ಕತ್ತು ಹಿಸುಕಿರುವುದು ಎಂದು ತಿಳಿದುಬಂದಿದೆ.

   ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದಾಗ ಶಬಾನಾಳ ಸಹೋದರ ಸಲೀಂ ಪೊಲೀಸರಿಗೆ ಅಬಿದ್‌ನನ್ನು ಕೊಲೆ ಮಾಡಿರಬಹುದು ಎಂದು ಹೇಳಿದ್ದಾರೆ. ಅಲ್ಲದೆ, ಈ ಕೊಲೆಯಲ್ಲಿ ಶಬಾನಾಗೆ ಯಾರಾದರೂ ಸಹಾಯ ಮಾಡಿರಬಹುದು ಎಂದು ಅಂದಾಜಿಸಲಾಗಿತ್ತು. ಅದರ ನಂತರ, ಪೊಲೀಸರು ಶಬಾನಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಪ್ರಾರಂಭಿಸಿದ್ದರು. ಅವರು ಆಕೆಯ ಫೋನ್ ಕಾಲ್ ದಾಖಲೆಗಳನ್ನು ಪರಿಶೀಲಿಸಿದರು. 

   ಆ ಸಮಯದಲ್ಲಿ, ಅವಳು ರೆಹಾನ್ ಎಂಬ ಯುವಕನೊಂದಿಗೆ ಮಾತನಾಡಿದ್ದಾಳೆಂದು ಪೊಲೀಸರಿಗೆ ತಿಳಿದುಬಂದಿತು. ಅಬಿದ್ ಸತ್ತಾಗಲೂ ಇಬ್ಬರೂ ಮಾತನಾಡಿದ್ದರು. ಇದಾದ ನಂತರ, ಪೊಲೀಸರು ರೆಹಾನ್ ಅವರನ್ನು ವಶಕ್ಕೆ ಪಡೆದರು. ಇಬ್ಬರನ್ನೂ ಕೂಲಂಕಷವಾಗಿ ವಿಚಾರಣೆ ನಡೆಸಿದಾಗ, ಇಬ್ಬರೂ ಸೇರಿ ಅಬಿದ್ ನನ್ನು ಕೊಂದಿದ್ದಾಗಿ ಒಪ್ಪಿಕೊಂಡರು. ಆ ನಂತರ, ಇಬ್ಬರನ್ನೂ ಬಂಧಿಸಲಾಯಿತು.

   ಪೊಲೀಸರ ಪ್ರಕಾರ, ಶಬಾನಾ ಮತ್ತು ರೆಹಾನ್ ಕಳೆದ 1 ವರ್ಷದಿಂದ ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹಿತರಾಗಿದ್ದರು. ರೆಹಾನ್ ಉನ್ನಾವೊದ ಬಂಗಾರಮೌ ನಿವಾಸಿ. ಅಬಿದ್ ಮನೆಯಲ್ಲಿ ಇಲ್ಲದಿದ್ದಾಗ ಅವನು ಶಬಾನಾಳನ್ನು ಭೇಟಿಯಾಗಲು ಬರುತ್ತಿದ್ದ. ಇಬ್ಬರೂ ಅಕ್ರಮ ಸಂಬಂಧವನ್ನು ಬೆಳೆಸಿಕೊಂಡರು. ಈ ಬಗ್ಗೆ ಅಬಿದ್ ಕೂಡ ಅನುಮಾನಗೊಂಡಿದ್ದ. ಅದರ ನಂತರ, ಅಬಿದ್ ಮತ್ತು ಶಬಾನಾ ನಡುವೆ ವಾದ ಪ್ರಾರಂಭವಾಯಿತು. ಈ ವಾದಗಳಿಂದ ಬೇಸತ್ತ ಶಬಾನಾ ಮತ್ತು ರೆಹಾನ್ ಅಬಿದ್​ನನ್ನು ತಮ್ಮ ಮಾರ್ಗದಿಂದ ತೆಗೆದುಹಾಕಲು ಸಂಚು ರೂಪಿಸಿದರು. ಅಬಿದ್ ಕೊಲೆಯಾದ ದಿನ ಶಬಾನಾ ರೆಹಾನ್ ಮತ್ತು ಅವನ ಇನ್ನೊಬ್ಬ ಸ್ನೇಹಿತ ವಿಕಾಸ್​ನನ್ನು ತನ್ನ ಮನೆಗೆ ಕರೆಸಿದ್ದಳು. ಆ ಮೂವರು ಸೇರಿ ಅಬಿದ್ ನನ್ನು ಕತ್ತು ಹಿಸುಕಿ ಕೊಂದರು. ಅದಾದ ನಂತರ ಶಬಾನಾ ಅಬಿದ್​ನ ಜೇಬಿನಲ್ಲಿ ವಯಾಗ್ರ ಮಾತ್ರೆಗಳ ಪ್ಯಾಕೆಟ್​ಗಳನ್ನು ಇಟ್ಟಳು. ಅದು ಕೊಲೆಯಲ್ಲ, ಅತಿಯಾದ ಮಾತ್ರೆಗಳ ಸೇವನೆಯಿಂದ ನಡೆದ ಆಕಸ್ಮಿಕ ಸಾವು ಎಂಬಂತೆ ಬಿಂಬಿಸಿದ್ದಳು.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles