ಮಂಡ್ಯ:
ಯಾವ ಲಂಚದ ಹಣವನ್ನೂ ಮುಟ್ಟದ ಸತ್ಯಹರಿಶ್ಚಂದ್ರ ಇದ್ದರೆ ಅದು ನಮ್ಮ ಕುಮಾರಸ್ವಾಮಿ ಮಾತ್ರ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡುವುದೆಲ್ಲವೂ ಗಂಭೀರ ಆರೋಪವೇ. ಆದರೆ, ಅವರು ಬಾಯಿ ಚಪಲಕ್ಕೆ ಮಾತನಾಡುತ್ತಾರಷ್ಟೆ ಎಂದು ದೂರಿದರು.
ಸತ್ಯಹರಿಶ್ಚಂದ್ರ ಹೋದ ಮೇಲೆ ಲಂಚ ಮುಟ್ಟದೆ ಇರುವವರು, ಬೇರೆಯವರಿಂದ ಹಣ ತೆಗೆದುಕೊಳ್ಳದೇ ಇರುವವರು, ಯಾವುದೇ ಸಹಾಯ ಪಡೆಯದೇ ಇರುವವರು ಈ ಭೂಮಿ ಮೇಲಿದ್ದರೆ ಅವರು ಕುಮಾರಸ್ವಾಮಿ ಒಬ್ಬರೆ ಎನ್ನುವುದನ್ನು ನಾವು–ನೀವೆಲ್ಲ ಒಪ್ಪಿಕೊಳ್ಳಬೇಕಿದೆ ಎಂದರು.
ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಾರು ವಿಚಾರದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ನಾನು ಒಬ್ಬ ಕೇಂದ್ರ ಸಚಿವನಾಗಿದ್ದರೂ ರಾಜ್ಯ ಸರ್ಕಾರ ದ್ವೇಷದ ರಾಜಕೀಯ ಮಾಡಿಕೊಂಡು ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ ಎಂದು ದೂರಿದ್ದರು.
ನಾನು ದೆಹಲಿಯಿಂದ ಬೆಂಗಳೂರಿಗೆ ಬಂದಾಗ ಪೋಟೋಕಾಲ್ ಪ್ರಕಾರ ಕಾರನ್ನು ಕಳಿಸಿಲ್ಲ. ಕೊನೆಗೆ ನಾನು ನನ್ನ ಇಲಾಖೆಯಾದ ಬೃಹತ್ ಕೈಗಾರಿಕೆ ಇಲಾಖೆಯ ಕಾರನ್ನು ತರಿಸಿಕೊಂಡು ಓಡಾಡುತ್ತಿದ್ದೇನೆ ಎಂದಿದ್ದರು. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಆಪಾದಿಸಿದ್ದರು.
ನನಗೆ ರಾಜ್ಯ ಸರ್ಕಾರ ಶಿಷ್ಟಾಚಾರದ ಪ್ರಕಾರ ಕಾರನ್ನು ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ನಾನು ಲೋಕಸಭಾ ಸದಸ್ಯನಾಗಿದ್ದ ಸಂದರ್ಭದಲ್ಲಿ ಅಂಬರೀಷ್ ಅವರು ಬಳಸುತ್ತಿದ್ದ ಕಾರನ್ನೇ ಒಂದು ವರ್ಷ ಬಳಸಿದ್ದೆ. ಈಗ ಮಂತ್ರಿಯಾಗಿರುವೆ, ಹಿಂದಿನ ಸರ್ಕಾರದಲ್ಲಿ ಉಪಯೋಗಿಸುತ್ತಿದ್ದ ಕಾರನ್ನೇ ಎಲ್ಲ ಮಂತ್ರಿಗಳೂ ಆರು ತಿಂಗಳು ಬಳಸಿದ್ದೆವು.
ಯಾವುದೇ ಕಾರನ್ನು ಬದಲಾವಣೆ ಮಾಡಬೇಕೆಂದರೆ ಇಷ್ಟು ಕಿ.ಲೋ.ಮೀಟರ್ ಓಡಿಸಬೇಕೆನ್ನುವ ನಿಯಮವಿದೆ. ಅದನ್ನು ಪಾಲಿಸಬೇಕಲ್ಲವೇ? ಅದನ್ನ ಬಿಟ್ಟು ಮಾಧ್ಯಮದ ಮುಂದೆ ಬಂದು ಸರ್ಕಾರ ನನಗೆ ಕಾರ್ ಕೊಟ್ಟಿಲ್ಲ ಎನ್ನುವುದು ಸರಿಯಲ್ಲ. ಹಿಂದಿನ ಸಂಸದೆ ಸುಮಲತಾ ಅವರು ಉಪಯೋಗಿಸುತ್ತಿದ್ದ ಕಾರನ್ನು ಬಳಸಲ್ಲ ಎಂದರೆ ಹೇಗೆ?’ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.