Friday, June 27, 2025

spot_img

ಯಡಿಯೂರಪ್ಪ ಇಂತಹ ಕೃತ್ಯವೆಸಗುತ್ತಾರೆಂದು ಊಹಿಸಲೂ ಅಸಾಧ್ಯ’: ಫೋಕ್ಸೋ ಸಂತ್ರಸ್ತೆ ಸಹೋದರ!

ಬೆಂಗಳೂರು:

    ಅಪ್ರಾಪ್ತ ಹೆಣ್ಣಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಬಿಎಸ್ ಯಡಿಯೂರಪ್ಪ ವಿರುದ್ಧ ಪ್ರಕರಣದ ತನಿಖೆ ನ್ಯಾಯಾಲಯದಲ್ಲಿರುವಂತೆಯೇ ಇತ್ತ ಸಂತ್ರಸ್ಥೆಯ ಸಹೋದರ ಎಂದು ಹೇಳಿಕೊಂಡ ವ್ಯಕ್ತಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ತನ್ನ ಸಹೋದರಿ ತನಗಾದ ಚಿತ್ರಹಿಂಸೆಯಿಂದಾಗಿ ನಿತ್ಯ ನರಕ ನೋಡುತ್ತಿದ್ದಾಳೆ ಎಂದು ಹೇಳಿದ್ದಾರೆ.

   ‘ಅತೀವ ದುಃಖದಿಂದ ನಾನು ಇಂದು ಈ ವಿಡಿಯೋ ಮಾಡುತ್ತಿದ್ದೇನೆ. ನನ್ನ ಪುಟ್ಟ ತಂಗಿ ಮೇಲಾದ ದೌರ್ಜನ್ಯದಿಂದಾಗಿ ನನ್ನ ಕುಟುಂಬ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ನಿಜಕ್ಕೂ ಯಡಿಯೂರಪ್ಪ ರಂತಹವರು ಇಂತಹ ಕೃತ್ಯವೆಸಗುತ್ತಾರೆಂದು ಊಹಿಸಲೂ ಅಸಾಧ್ಯ. ಅದೂ ಕೂಡ ಅವರ ಮೊಮ್ಮಕ್ಕಳಿಗಿಂತಲೂ ಚಿಕ್ಕವಳಾದ ನನ್ನ ಪುಟ್ಟ ತಂಗಿ ಮೇಲೆ ಇಂತಹ ಕೃತ್ಯ ನಡೆಸಿದ್ಜಾರೆ. ನನಗೆ ಮತ್ತು ನನ್ನ ಪುಟ್ಟ ತಂಗಿಗೆ ಇದು ನಿಜಕ್ಕೂ ಆಘಾತವಾಗಿದೆ.’ 

    ನನ್ನ ಪುಟ್ಟ ತಂಗಿ ತನ್ನ ಮೇಲಾದ ದೌರ್ಜನ್ಯದಿಂದಾಗಿ ನಿತ್ಯ ನರಕ ಅನುಭವಿಸುತ್ತಿದ್ದಾಳೆ. ಅಂದು ನಡೆದ ಕೆಟ್ಟ ಘಟನೆಗಳು ಆಕೆಯನ್ನು ಇನ್ನಿಲ್ಲದಂತೆ ಕಾಡುತ್ತಿವೆ. ಇದೇ ಕೆಟ್ಟ ಘಟನೆಗಳ ವಿರುದ್ಧ ಹೋರಾಡುತ್ತಿದ್ದ ನನ್ನ ತಾಯಿ ಕೂಡ ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಸಾವು ನಮಗೆ ಇನ್ನೂ ಆಘಾತ ತಂದಿದೆ. ನಮ್ಮ ಭಾವನೆಗಳು, ಆಕ್ರೋಶ ಎಲ್ಲವನ್ನೂ ನಮ್ಮೊಳಗೇ ಇಟ್ಟುಕೊಂಡು ಒದ್ದಾಡುವಂತೆ ಮಾಡಿದೆ. ನಮ್ಮ ತಾಯಿಯೇ ನಮ್ಮ ಧೈರ್ಯವಾಗಿದ್ದರು. ಆದರೆ ಅವರ ಸಾವು ನ್ಯಾಯಕ್ಕಾಗಿ ಹೋರಾಡುವ ನಮ್ಮ ಹಾದಿಯಲ್ಲಿ ನಮಗೆ ಭರಿಸಲಾರದ ನಷ್ಟ ತಂದಿದೆ. ಸುಮಾರು ಒಂದು ದಶಕದಿಂದ ಅಂದರೆ 2016ರಲ್ಲಿ ಮೊದಲ ಪೋಕ್ಸೋ ಪ್ರಕರಣ ದಾಖಲಾದ ದಿನದಿಂದಲೂ ಆಕೆ ಈ ಹೋರಾಟ ನಡೆಸಿದ್ದರು.

    ನ್ಯಾಯಕ್ಕಾಗಿ ನಮ್ಮ ತಾಯಿ ವಿವಿಧ ನಾಯಕರನ್ನು, ಅಧಿಕಾರಿಗಳನ್ನು ಭೇಟಿಯಾದರು. ಆದರೆ ಆಕೆಗೆ ನ್ಯಾಯ ಕೊಡಿಸುವ ಬದಲು ಆಕೆಯ ವಿರುದ್ಧವೇ ಸುಳ್ಳು ಪ್ರಕರಣಗಳು ದಾಖಲಾದವು. ನಮ್ಮ ತಾಯಿ ವಿರುದ್ಧ ದಾಖಲಾದ ಯಾವುದೇ ಪ್ರಕರಣವೂ ಸತ್ಯವಲ್ಲ. ಅದೆಲ್ಲ ಸುಳ್ಳು ಪ್ರಕರಣಗಳು.. ಬಿಎಸ್ ಯಡಿಯೂರಪ್ಪರನ್ನು ರಕ್ಷಿಸಲು ನಮ್ಮ ತಾಯಿ ವಿರುದ್ಧ ಹಾಕಲಾದ ಸುಳ್ಳು ಪ್ರಕರಣಗಳು ಅವು ಎಂದು ಆರೋಪಿಸಿದ್ದಾರೆ.

   ಅಂತೆಯೇ ಪ್ರಸ್ತುತ ಈಗ 6 ಪ್ರಕರಣಗಳು ವಿಚಾರಣೆಯ ಹಂತದಲ್ಲಿದ್ದು, 50 ಪ್ರಕರಣಗಳು ಇನ್ನೂ ಪಿಟಿಷನ್ ಹಂತದಲ್ಲಿವೆ. ಹಿರಿಯ ಪೊಲೀಸ್ ಅಧಿಕಾರಿ ನ್ಯಾಯ ಕೇಳಲು ಹೋದ ನಮ್ಮ ತಾಯಿಯ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದರು. ಇಂತಹ ಕೃತ್ಯಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಕೃತ್ಯಗಳು ನ್ಯಾಯ-ನ್ಯಾಯಾಲಯಗಳ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡುತ್ತವೆ. ಪ್ರಕರಣ ವಾಪಸ್ ಪಡೆಯಲು ಬೆದರಿಕೆಗಳು ಬರುತ್ತಿದ್ದು, ನಮ್ಮ ಕುಟುಂಬ ನಡೆಸುವುದೇ ಸವಾಲಾಗಿದೆ. ನನ್ನ ಪುಟ್ಟ ತಂಗಿ ಎಷ್ಟು ಜರ್ಜಿರಿತಳಾಗಿದ್ದಾಳೆ ಎಂದರೆ ಆಕೆ ಶಾಲೆಗೆ ಹೋಗುವುದನ್ನೇ ತ್ಯಜಿಸಿದ್ದಾಳೆ. ನನಗೆ ಭಯವಾಗುತ್ತಿದ್ದು, ನೇರವಾಗಿ ಪರೀಕ್ಷೆ ಬರೆಯುತ್ತೇನೆ ಎಂದು ಹೇಳುತ್ತಿದ್ದಾಳೆ.

    ನನ್ನ ತಂಗಿಗಾದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಯಾರದರೂ ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳುವವರಿಗೆ ಕಠಿಣ ಶಿಕ್ಷೆ ನೀಡಬೇಕು. ಇದು ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನನ್ನ ಮನವಿ. ನಮಗೆ ನ್ಯಾಯ ಕೊಡಿಸಿ.. ನಮಗಾಗಿ.. ನ್ಯಾಯಕ್ಕಾಗಿ ವಾದ ಮಾಡುವ ಒಳ್ಳೆಯ ವಕೀಲರನ್ನು ನಮಗೆ ನೇಮಕ ಮಾಡಿಕೊಡಿ.

   ಏಕೆಂದರೆ ನ್ಯಾಯಾಲಯವೇ ನಮ್ಮ ಅಂತಿಮ ನ್ಯಾಯ ಸಿಗುವ ಭರವಸೆಯಾಗಿದೆ. ದಶಕವೇ ಕಳೆದರೂ ನಮಗಿನ್ನೂ ನ್ಯಾಯಾಲಯದ ಮೇಲೆ ಭರವಸೆ ಇದೆ. ನಾನಾಗಲಿ ಅಥವಾ ನನ್ನ ಪುಟ್ಟ ತಂಗಿಯಾಗಲಿ ನಾವು ಯಾರಿಗೂ ಹೆದರುವುದಿಲ್ಲ. ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ. ಈ ಪ್ರಕರಣ ವಜಾ ಆಗದಂತೆ ನೋಡಿಕೊಳ್ಳಿ ಎಂದು ಪೋಕ್ಸೋ ಪ್ರಕರಣದ ಸಂತ್ರಸ್ಛೆಯ ಸಹೋದರ ಮನವಿ ಮಾಡಿದ್ದಾರೆ.

Related Articles

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles