ಕಲಬುರಗಿ:
ಬೀದರ್ನಲ್ಲಿ ಯುವ ಗುತ್ತಿಗೆದಾರ ಸಚೀನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ಸಂಬಂಧ ಬಿಜೆಪಿ-ಕಾಂಗ್ರೆಸ್ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ. ಈ ಮಧ್ಯೆ ಎರಡೂ ಪಕ್ಷಗಳ ಸೋಶಿಯಲ್ ಮೀಡಿಯಾ ಪೋಸ್ಟ್ ವಾರ್ ಜನರ ಗಮನ ಸೆಳೆಯುತ್ತಿವೆ.
ಸಚಿನ್ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರಿಯಾಂಕ್ ಖರ್ಗೆ ವಿರುದ್ಧ ಸಾಮಾಜಿಕ ಜಾಲತಾಣ ಪೋಸ್ಟ್ ವಾರ್ ಆರಂಭಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆಯನ್ನು ಕಲಬುರಗಿಯ ನಿಜಾಮ ಎಂದು ಹೇಳಿದೆ.
ಇಷ್ಟೇ ಅಲ್ಲದೇ, ಖರ್ಗೆ ಕುಟುಂಬದವರದ್ದು ಪ್ರಾಯೋಜಿತ ಸುಪಾರಿ ಎಂದೂ ಟೀಕಾ ಪ್ರಹಾರ ನಡೆಸಿರುವ ಬಿಜೆಪಿ “ವಿವಿಧ ರೀತಿಯಲ್ಲಿ ಗೂಂಡಾಗಿರಿಗೆ ಬೇಕಾದ ಸಾಮಗ್ರಿಗಳು ದೊರೆಯುತ್ತವೆ, ಸುಪಾರಿ ನೀಡುವವರು ನಮ್ಮನ್ನು ಸಂಪರ್ಕಿಸಿ” ಎಂದು ಬರೆದಿರುವ ಫಲಕದೊಂದಿಗೆ ಪ್ರಿಯಾಂಕ್ ಖರ್ಗೆಯ ವ್ಯಂಗ್ಯ ಚಿತ್ರ ರಚಿಸಿ ವ್ಯಂಗ್ಯವಾಡಿದೆ.
ಇದಕ್ಕೂ ಮೊದಲು ಖರ್ಗೆ ಪ್ರಾಯೋಜಿತ ಸುಪಾರಿ ಎಂಬ ಪೋಸ್ಟರ್ ಅಂಟಿಸಿದ್ದ ಬಿಜೆಪಿ ನಾಯಕರು, ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದ್ದರು. ಈ ಘಟನೆಗಳ ಹಿನ್ನೆಲೆಯಲ್ಲಿ ರೇಸ್ಕೋರ್ಸ್ ರಸ್ತೆಯಲ್ಲಿರುವ ಪ್ರಿಯಾಂಕ್ ಖರ್ಗೆ ಸರ್ಕಾರಿ ನಿವಾಸಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.