ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ವಿಟ್ಲಪಿಂಡಿ ಉತ್ಸವದ ಸಿದ್ಧತೆಗಳು ಆರಂಭಗೊಂಡಿದ್ದು, ಕೃಷ್ಣಮಠದ ಕನಕ ಗೋಪುರದ ಬಳಿ ಮೊಸರುಕುಡಿಕೆ ಕಂಬದ ಮುಹೂರ್ತ ನೆರವೇರಿತು.

ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ನಡೆಯಲಿರುವ ವಿಟ್ಲಪಿಂಡಿ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಮೊಸರುಕುಡಿಕೆ ಉತ್ಸವವೂ ಒಂದಾಗಿದೆ. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಮರುದಿನ ನಡೆಯುವ ವಿಟ್ಲಪಿಂಡಿ ಅಥವಾ ಕೃಷ್ಣಲೀಲೋತ್ಸವ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಮೊಸರುಕುಡಿಕೆ ಕಾರ್ಯಕ್ರಮ ನಡೆಯುತ್ತದೆ.

ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಈ ಆಚರಣೆಯಲ್ಲಿ ಗೊಲ್ಲರ ವೇಷಧಾರಿಗಳು ಉತ್ಸಾಹದಿಂದ ಪಾಲ್ಗೊಂಡು ಎತ್ತರದಲ್ಲಿ ಕಟ್ಟಿರುವ ಮೊಸರು ತುಂಬಿದ ಮಡಿಕೆಗಳನ್ನು ಒಡೆಯುವುದು ವಿಶೇಷ. ಉತ್ಸವದ ವೇಳೆ ರಥಬೀದಿಯಲ್ಲಿ ಭಕ್ತರ ದೊಡ್ಡ ಸಮೂಹ ಸೇರುವುದರಿಂದ ವಿಟ್ಲಪಿಂಡಿ ಉಡುಪಿ ನಗರದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಯಾಗಿ ಗುರುತಿಸಿಕೊಂಡಿದೆ.

ಕೃಷ್ಣಮಠದ ಕನಕ ಗೋಪುರದ ಬಳಿ ನಡೆದ ಕಂಬದ ಮುಹೂರ್ತ ಸಂದರ್ಭದಲ್ಲಿ ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು ಹಾಗೂ ಕೃಷ್ಣಮಠದ ಕೊಟ್ಟಾರಿಗಳಾದ ರಾಮ ಕೊಡಂಚ ಉಪಸ್ಥಿತರಿದ್ದರು. ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ಮೊಸರುಕುಡಿಕೆ ಮಾತ್ರವಲ್ಲದೆ ಕೃಷ್ಣನ ಲೀಲೋತ್ಸವ, ವಿವಿಧ ಸಾಂಪ್ರದಾಯಿಕ ವೇಷಗಳು, ರಥೋತ್ಸವ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಉಡುಪಿಯಲ್ಲಿ ವಿಶೇಷ ಮೆರುಗು ನೀಡುತ್ತವೆ.


