ಉಡುಪಿ : ಕಳೆದ ಎರಡು ತಿಂಗಳಿನಿಂದ ಆಹಾರ ತಯಾರಿಸುವ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ಅಡುಗೆ ಅನಿಲ ಸರಬರಾಜು ಆಗುತ್ತಿಲ್ಲ. ಆದರೆ ಕಾಳಸಂತೆಯಲ್ಲಿ ಗ್ಯಾಸ್ ದೊರೆಯುತ್ತಿದ್ದು, ಕೇಟರಿಂಗ್ ಕ್ಷೇತ್ರಕ್ಕೂ ಪೂರೈಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ಯಾಸ್ ವಿತರಕ ಏಜೆನ್ಸಿಗಳ ಸರಬರಾಜು ವ್ಯವಸ್ಥೆಯ ಬಗ್ಗೆ ಸಮಗ್ರ ಅಡಿಟ್ ನಡೆಸಬೇಕು ಎಂದು ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ. ಗೋವಿಂದ ರಾಜ್ ಹೆಗ್ಡೆ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ವತಿಯಿಂದ ಬಾರ್ಗಳಿಗೆ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯವನ್ನು ಖಂಡಿಸಿ ಉಡುಪಿ ಕರಾವಳಿ ಬೈಪಾಸ್ನ ಶಾರದಾ ಹೋಟೆಲ್ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯನ್ನು ನೆಪವನ್ನಾಗಿ ಮಾಡಿಕೊಂಡು ಕಳೆದ ಎರಡು ತಿಂಗಳಿನಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಜಿಎಸ್ಟಿ ಹಾಗೂ ಅಬಕಾರಿ ತೆರಿಗೆ ಪಾವತಿಸುವ ಉದ್ಯಮಗಳಿಗೆ ಅಗತ್ಯ ಅನಿಲ ದೊರೆಯದಿದ್ದರೆ ವ್ಯವಹಾರ ನಡೆಸುವುದು ಕಷ್ಟಕರ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಗ್ಯಾಸ್ ಸಮಸ್ಯೆ ಎದುರಾಗದಿದ್ದರೂ, ಬಾರ್ ಹಾಗೂ ಹೋಟೆಲ್ಗಳಿಗೆ ಮಾತ್ರ ಈ ಸಮಸ್ಯೆ ಯಾಕೆ ಎದುರಾಗುತ್ತಿದೆ? ಎಂದು ಪ್ರಶ್ನಿಸಿದರು.

ತಿಂಗಳಿಗೆ 30ರಿಂದ 40 ಸಾವಿರ ರೂ.ವರೆಗೆ ಜಿಎಸ್ಟಿ ಪಾವತಿಸುತ್ತಿದ್ದೇವೆ. ಬಾರ್ ಆ್ಯಂಡ್ ರೆಸ್ಟೋರೆಂಟ್ ಹಾಗೂ ವೆಜ್ ರೆಸ್ಟೋರೆಂಟ್ಗಳಿಗೆ ಆದ್ಯತೆ ಮೇರೆಗೆ ಗ್ಯಾಸ್ ಪೂರೈಕೆ ಮಾಡಬೇಕು. ಜಿಲ್ಲಾಧಿಕಾರಿಗಳು ಗ್ಯಾಸ್ ಏಜೆನ್ಸಿಗಳ ವಿತರಣೆ ಮತ್ತು ಸರಬರಾಜು ಕುರಿತು ಅಡಿಟ್ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಮನವಿಗೆ ಸ್ಪಂದನೆ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಉಡುಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಸಜ್ಜನ್ ಹೆಗ್ಡೆ, ಹಂಸರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.



